ಬೆಂಗಳೂರು, ಜು 26 (DaijiworldNews/HR): ಚೀನಾ ಲಡಾಖ್ ಪ್ರಾಂತ್ಯದಲ್ಲಿ ವಾಯುಸೀಮೆ ಉಲ್ಲಂಘಿಸಿ ಭಾರತದ ಗಡಿ ಪ್ರವೇಶಿಸಿದೆ. ಅತ್ತ ಸಿಯಾಚಿನ್ ಗಡಿಯಲ್ಲಿ ಭಾರತದ ಭೂಭಾಗವನ್ನು ಅವ್ಯಾಹತವಾಗಿ ಅಕ್ರಮಿಸುತ್ತಿದೆ. ಚೌಕಿದಾರ್ ಮೋದಿ ಎಲ್ಲಿದ್ದಾರೆ? ಚೀನಾದ ನಡೆ ವಿರುದ್ದ ಮಾತಾಡಲು ಮೋದಿಗೆ ಅಷ್ಟೊಂದು ಹೆದರಿಕೆಯೇಕೆ? ಕಾಗದದ ಹುಲಿ ಮೋದಿ, ಚೀನಾದ ಎದುರು ಬಾಲ ಮುಚ್ಚಿದ ಇಲಿಯಾಗುವುದು ಯಾಕೆ ಎಂದು ಕಾಂಗ್ರಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಒಂದು ಕಡೆ ಚೀನಾ ಭಾರತದ ವಾಯುನೆಲೆ ಹಾಗೂ ಭೂ ಭಾಗ ಪ್ರವೇಶಿಸಿ ಪ್ರಚೋದಿಸುತ್ತಿದೆ. ಇತ್ತ ಚೀನಾ ನಮ್ಮೊಂದಿಗೆ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದರೆ, ಅತ್ತ ಭಾರತ 39ಸಾವಿರ ರೈಲ್ವೇ ಕೋಚ್ ವ್ಹೀಲ್ಗಳನ್ನು ಚೀನಾದಿಂದ ಖರೀದಿಸಿದೆ. ಎಲ್ಲಿ ಹೋಯಿತು ಮೋದಿಯವರ ಆತ್ಮನಿರ್ಭರತೆ? ಅದು ಆತ್ಮಹತ್ಯೆ ಮಾಡಿಕೊಂಡಿತೆ? ಕಿಂಚಿತ್ತಾದರೂ ಸ್ವಾಭಿಮಾನ ಬೇಡವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮೋದಿಯವರ ಅಂಧಭಕ್ತರು 'ಬಾಯ್ಕಾಟ್ ಚೀನಾ' ಎಂದು ಗೋಳಾಡುತ್ತಿದ್ದರೆ, ಅತ್ತ ಮೋದಿಯವರು ಹಲ್ಲುಗಿಂಜಿಕೊಂಡು ಚೀನಾದೊಂದಿಗೆ ವ್ಯವಹರಿಸುತ್ತಿದ್ದಾರೆ. ಇದಕ್ಕಿಂತ ವಿಪರ್ಯಾಸವುಂಟೆ? ಚೀನಾ ನಮ್ಮ ದೇಶದ ಗಡಿ ಅಕ್ರಮಿಸುತ್ತಿದ್ದರೂ ಮೋದಿಯವರಿಗೆ ಅದು ವಿಷಯವೇ ಅಲ್ಲ. ದೇಶದ ಸ್ವಾಭಿಮಾನ ಒತ್ತೆಯಿಟ್ಟು ಚೀನಾದ ಎದುರು ನಡುಬಗ್ಗಿಸುವುದು ಯಾವ ಸೀಮೆಯ ಪೌರುಷ ಎಂದು ಪ್ರಶ್ನಿಸಿದ್ದಾರೆ.