ಬೆಂಗಳೂರು, ಜು 24 (DaijiworldNews/DB): ಪ್ರಿಯತಮನ ಬಳಿ ಖರ್ಚು ಮಾಡಲು ಹಣವಿಲ್ಲ ಎಂಬ ಕಾರಣಕ್ಕಾಗಿ ಪ್ರೇಯಸಿ ತನ್ನ ದೊಡ್ಡಪ್ಪನ ಮನೆಯಿಂದಲೇ ಕಳ್ಳತನದ ಐಡಿಯಾ ನೀಡಿದ್ದು, ದರೋಡೆ ಪ್ರಕರಣದಲ್ಲಿ ಇದೀಗ ಇಬ್ಬರೂ ಜೈಲು ಸೇರಿದ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಕಾಂ ವಿದ್ಯಾರ್ಥಿನಿ ದೀಕ್ಷಿತಾ ( 19) ಹಾಗೂ ವೈದ್ಯಕೀಯ ವಿದ್ಯಾರ್ಥಿ ಮಧು ( 19) ಬಂಧಿತರು. ಇವರಿಬ್ಬರೂ ಪ್ರೀತಿಸುತ್ತಿದ್ದ ಸುತ್ತಾಡಲು ಹಣವಿಲ್ಲ ಎಂಬ ಕಾರಣದಿಂದ ಬೇಸರಗೊಂಡಿದ್ದರು. ಈ ವೇಳೆ ದೀಕ್ಷಿತಾಗೆ ದೊಡ್ಡಪ್ಪ ತಿಮ್ಮೇಗೌಡ ಎಂಬವರ ಮನೆಯಿಂದ ಕಳ್ಳತನ ಮಾಡುವ ಐಡಿಯಾ ಹೊಳೆದಿದ್ದು, ಇದನ್ನು ಪ್ರಿಯತಮ ಮಧು ಬಳಿ ಹೇಳಿಕೊಂಡಿದ್ದಾಳೆ. ಆತನೂ ಇದಕ್ಕೆ ಒಪ್ಪಿಗೆ ನೀಡಿದ್ದು, ಬೆಂಗಳೂರು ಉತ್ತರ ತಾಲೂಕಿನ ನೆಲಗದಿರನಹಳ್ಳಿ ಗ್ರಾಮದಲ್ಲಿರುವ ದೊಡ್ಡಪ್ಪನ ಮನೆಗೆ ತೆರಳಿದ್ದಾರೆ. ಮನೆಯ ಕಂಪೌಂಡ್ನಲ್ಲಿ ಮಾಟ ಮಂತ್ರದ ವಸ್ತುಗಳನ್ನು ಇಟ್ಟು ಮನೆಯವರ ಗಮನ ಬೇರೆಡೆ ಸೆಳೆದಿದ್ದಾರೆ. ಬಳಿಕ ಅವುಗಳನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಮಧು ಮನೆಯ ಮಹಡಿಗೆ ತೆರಳಿ ಉಪಾಯವಾಗಿ ಮನೆಯಲ್ಲಿದ್ದ 90 ಸಾವಿರ ರೂ. ನಗದು, 200 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ.
ಕಳ್ಳತನವಾಗಿರುವ ವಿಚಾರ ಗೊತ್ತಾದ ಕೂಡಲೇ ತಿಮ್ಮೇಗೌಡ ಮನೆಯವರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಘಟನೆ ನಡೆದ ದಿನ ಅಪರಿಚಿತನೋರ್ವ ಬಂದಿರುವುದು ಗೊತ್ತಾಗಿದೆ. ಕೂಡಲೇ ಆರೋಪಿಯ ಜಾಡು ಹಿಡಿದ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ಆರೋಪಿ ಮಧುವನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರಿಯತಮೆ ದೀಕ್ಷಿತಾ ನೀಡಿರುವ ಐಡಿಯಾವನ್ನು ಮಧು ತಿಳಿಸಿದ್ದಾನೆ. ಹೀಗಾಗಿ ದೀಕ್ಷಿತಾಳನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 30 ಸಾವಿರ ರೂ. ನಗದು, 200 ಗ್ರಾಂನಷ್ಟು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.