ಶಿವಮೊಗ್ಗ, ಜು 22 (DaijiworldNews/HR): ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಸ್ರ್ಪಧಿಸಲ್ಲ ಎಂಬ ಮಾತ್ರಕ್ಕೆ ರಾಜಕೀಯ ನಿವೃತ್ತಿಯಲ್ಲ, ನಿವೃತ್ತಿ ಎಂಬುದು ಅವರ ಡಿಕ್ಷನರಿಯಲ್ಲಿಯೇ ಇಲ್ಲ. ನಮ್ಮ ತಂದೆಯವರ ತೀರ್ಮಾನವನ್ನು ಪಾಲಿಸಲೇಬೇಕು ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಶಿಕಾರಿಪುರ ತಾಲೂಕಿನಿಂದ ಬಿ.ವೈ. ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಯಡಿಯೂರಪ್ಪ ಘೋಷಿಸಿರುವ ಬೆನ್ನಲ್ಲೇ ಚುನಾವಣಾ ರಾಜಕೀಯದಿಂದಲೇ ಯಡಿಯೂರಪ್ಪ ನಿವೃತ್ತಿ ಹೊಂದಲಿದ್ದಾರಾ ಎಂಬ ಪ್ರಶ್ನೆ ರಾಜ್ಯ ರಾಜಕೀಯ ವಲಯದಲ್ಲಿ ಆರಂಭವಾಗಿದ್ದು, ಈ ಕುರಿತು ಸ್ಪಷ್ಟನೆ ನೀಡಿರುವ ವಿಜಯೇಂದ್ರ, ನಿವೃತ್ತಿ ಎಂಬುದು ಯಡಿಯೂರಪ್ಪನವರ ಡಿಕ್ಷನರಿಯಲ್ಲಿಯೇ ಇಲ್ಲ. ನಮ್ಮ ತಂದೆ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ.
ಇನ್ನು ದೇವರು ಎಲ್ಲಿಯವರೆಗೆ ಶಕ್ತಿ ಕೊಡುತ್ತಾರೋ ಅಲ್ಲಿಯವರೆಗೂ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುತ್ತಾರೆ. ಹಿಂದೆ ಕೂಡ ಪಕ್ಷ ಸಂಘಟನೆ ಮಾಡಿದ್ದರು, ಮುಂದೆಯೂ ಮಾಡುತ್ತಾರೆ. ಕ್ಷೇತ್ರದ ಜನರ ತೀರ್ಮಾನದಂತೆ ಯಡಿಯೂರಪ್ಪ ನಡೆದುಕೊಂಡಿದ್ದಾರೆ ಎಂದರು.