ನವದೆಹಲಿ, ಜು 21 (DaijiworldNews/DB): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಅನಿವಾರ್ಯ. ಹೀಗಾಗಿ ಉದ್ದವ್ ಠಾಕ್ರೆ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಿಲ್ಲ ಎಂದು ಶಿವಸೇನೆ ಬಂಡಾಯ ನಾಯಕ, ಸಂಸದ ರಾಹುಲ್ ಶೆವಾಲೆ ಹೇಳಿದರು.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಾಯಕತ್ವದ ಕುರಿತು ಠಾಕ್ರೆಯವರೊಂದಿಗಿನ ಸಭೆಯಲ್ಲಿ ನಾನು ವಿಷಯ ಪ್ರಸ್ತಾಪಿಸಿದ್ದೆ. ಆದರೆ ಈ ವೇಳೆ ಸಂಜಯ್ ರಾವತ್ ಅವರು ಠಾಕ್ರೆ ನೇತೃತ್ವದಲ್ಲೇ ಚುನಾವಣೆ ಎದುರಿಸುವ ಕುರಿತು ಸನ್ನೆ ಮಾಡಿದರು. ಠಾಕ್ರೆ ಮೇಲೆ ಗೌರವವಿದೆ. ಆದರೆ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಅಸಾಧ್ಯ ಎಂದವರು ತಿಳಿಸಿದರು.
ಎನ್ ಸಿಪಿ ಮತ್ತು ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿ ಗಳಾಗಿರುವುದರಿಂದ ಮತ್ತು ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಯುಪಿಎ ಚುನಾವಣೆ ಎದುರಿಸುವುದರಿಂದ ಇದೆಲ್ಲವನ್ನು ನಮ್ಮ ಕಾರ್ಯಕರ್ತರು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿಯೊಂದಿಗಿನ ಮೈತ್ರಿ, ನರೇಂದ್ರ ಮೋದಿ ಯವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಶಿವಸೇನೆಯ ಹಲವರ ಇಚ್ಛೆ ಆಗಿದೆ ಎಂದರು.