ಹುಬ್ಬಳ್ಳಿ, ಜು 21 (DaijiworldNews/DB): ನಾವು ಎಂದಿಗೂ ಹೊಂದಾಣಿಕೆ ರಾಜಕೀಯ ಮಾಡುವುದಿಲ್ಲ. ವಿಷಯಾಧಾರಿತ ರಾಜಕೀಯದ ಮೂಲಕ ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಅಧಿಕಾರಕ್ಕೆ ಬರುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಅಧಿಕಾರಕ್ಕಾಗಿ ಕಿತ್ತಾಟ, ಹೊಂದಾಣಿಕೆ ರಾಜಕೀಯ ರಾಜ್ಯದಲ್ಲಿ ನಿರಂತರವಾಗಿದೆ. ಆದರೆ ಎಎಪಿಯು ಅಂತಹವುಗಳನ್ನು ಯಾವತ್ತೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಗರಣ, ಆರೋಪಗಳ ಮೇಲೆಯೇ ಪ್ರಮುಖ ಮೂರು ಪಕ್ಷಗಳು ದಿನಗಳೆಯುತ್ತಿವೆ. ನೈಜ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಸಿಎಂ ಸ್ಥಾನಕ್ಕೆ ಈಗಿಂದಲೇ ಕಿತ್ತಾಟ ಆರಂಭವಾಗಿದೆ. ಮತದಾರರ ತೀರ್ಪಿಗೂ ಮೊದಲು ತನ್ನನ್ನು ತಾನೇ ಸಿಎಂ ಎಂದು ಘೋಷಣೆ ಮಾಡಿಕೊಳ್ಳುವುದು ಮತದಾರರಿಗೆ ಮಾಡುವ ಅವಮಾನವಾಗಿದೆ ಎಂದವರು ಅಭಿಪ್ರಾಯಿಸಿದರು.
ಪಕ್ಷದಲ್ಲಿ ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಹತ್ತು ವಿಭಾಗಗಳನ್ನು ಮಾಡಲಾಗಿದೆ. ಗ್ರಾಮ್ಯ ಭಾಗದಲ್ಲಿಯೂ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ದೆಹಲಿ ಮಾದರಿಯಲ್ಲಿ ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನು ವಿಶ್ವದರ್ಜೆಯ ರೀತಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಬದ್ದ ಎಂದು ಭಾಸ್ಕರ ರಾವ್ ತಿಳಿಸಿದರು. ಪಕ್ಷ ಹೇಳಿದರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.