ಬೆಂಗಳೂರು, ಜು 19 (DaijiworldNews/MS): ರಾಜರಾಜೇಶ್ವರಿ ನಗರದ ‘ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್’ಗೆ ಬಾಂಬ್ ಬೆದರಿಕೆ ಹಾಕಿ ಸೋಮವಾರ ಇಡೀ ದಿನ ಆತಂಕ ಹುಟ್ಟಿಸಿದ್ದ ಪ್ರಕರಣದಲ್ಲಿ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನೇ ಇ-ಮೇಲ್ ಕಳುಹಿಸಿದ್ದನೆಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಶಾಲಾ ಸಿಬ್ಬಂದಿ, ಇ-ಮೇಲ್ ಪರಿಶೀಲಿಸುತ್ತಿದ್ದರು. ಇದೇ ವೇಳೆ ಅಪರಿಚಿತರೊಬ್ಬರು ಕಳುಹಿಸಿದ್ದ ಇ-ಮೇಲ್ ತೆರೆದಿದ್ದರು. 'ಕ್ಯಾಂಪಸ್ ಹಾಗೂ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ನಾಳೆ(ಸೋಮವಾರ) ಬೆಳಗ್ಗೆ 10 ಗಂಟೆಗೆ ಬ್ಲಾಸ್ಟ್ ಆಗುವ ಹಾಗೇ ಫಿಕ್ಸ್ ಮಾಡಲಾಗಿದೆ. ಶಾಲೆ ಆವರಣದ 200 ಮೀಟರ್ ಅದರ ಎಫೆಕ್ಟ್ ಆಗುತ್ತೆ. ಥ್ಯಾಂಕ್ಸ್, ಬಾಂಬ್ ಟೆರರಿಸ್ಟ್' ಎಂದು ಮೇಲ್ ಬೆದರಿಕೆ ನೋಡಿ ಆತಂಕಗೊಂಡ ಶಾಲಾ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ, ಮಕ್ಕಳನ್ನು ಬೇರೆ ಸ್ಥಳಾಂತರಿಸಿ ಶೋಧ ಮಾಡಿದ್ದರು.
ಆದರೆ ಬಳಿಕ ಇದೊಂದು ಹುಸಿ ಬಾಂಬ್ ಎಂದು ಪೊಲೀಸರು ಘೋಷಿಸಿದ್ದರು. ತನಿಖೆ ವೇಳೆ ಇದೇ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಈ ಮೇಲೆ ಕಳುಹಿಸಿರುವುದು ತಿಳಿದುಬಂದಿದೆ.
"ಜು.21ರಂದು 10ನೇ ತರಗತಿಗೆ ಮೊದಲ ಸೆಮಿಸ್ಟರ್ ಪರೀಕ್ಷೆ ಇತ್ತು. ಪರೀಕ್ಷೆ ಮುಂದೂಡಿಸಲೆಂದು ಪ್ಲ್ಯಾನ್ ಈ ಸಂಚು ರೂಪಿಸಿದ್ದ. ವಿದ್ಯಾರ್ಥಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಿ ಸತ್ಯಾಂಶ ಬಯಲಾಗಿದೆ. ವಿದ್ಯಾರ್ಥಿಯನ್ನ ಬಾಲ ಅಪರಾಧಿಗಳ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿಲಾಗಿದೆ " ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.