ಬೆಂಗಳೂರು, ಜು 18 (DaijiworldNews/MS): ಜಿಎಸ್ಟಿ ಏರಿಕೆಯಿಂದ ಕೆಎಂಎಫ್ ಉತ್ಪನ್ನಗಳಾದ ಮೊಸರು, ಮಜ್ಜಿಗೆ , ಲಸ್ಸಿ ಗಳ ಬೆಲೆ ಏರಿಕೆ ಕಂಡಿದೆ. ಕೇಂದ್ರದ ನೂತನ ಜಿಎಸ್ ಟಿ ನೀತಿ ಜಾರಿ ಹಿನ್ನೆಲೆ ಬೆಲೆ ಏರಿಕೆ ಮಾಡಲಾಗಿದ್ದು, ಜು.18 ರ ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.
ಬೆಲೆ ಏರಿಕೆ , ಜಿಎಸ್ಟಿ ಏರಿಕೆ ಕಂಗೆಟ್ಟಿರುವ ಕರ್ನಾಟಕದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆಯೇ? ಯಾಕೆಂದರೆ ಕರ್ನಾಟಕದ ಎಲ್ಲಾ ಹಾಲು ಒಕ್ಕೂಟಗಳು ಹಾಲಿನ ಬೆಲೆಯ ಪರಿಷ್ಕರಣೆಗಾಗಿ ಒತ್ತಾಯಿಸುತ್ತಿವೆ.
" ನಾವು ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಶೀಘ್ರದಲ್ಲೇ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪರಿಷ್ಕೃತ ದರಕ್ಕೆ ಅನುಮೋದನೆ ಪಡೆಯುತ್ತೇವೆ" ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 5 ರೂ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಾಲು ಒಕ್ಕೂಟಗಳು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಮಾತ್ರವಲ್ಲದೇ ಕೆಎಂಎಫ್ ಹಾಲಿನ ದರ ಏರಿಕೆಗೆ ಕೆಎಂಎಫ್ ಅಸ್ತು ಎಂದಿದೆ. ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸರ್ಕಾರ ಒಪ್ಪಿಗೆ ನೀಡಿದರೆ ಜನರ ಗಾಯದ ಮೇಲೆ ಸರ್ಕಾರ ಬರೆ ಎಳೆದಂತಾಗುವುದು .