ನವದೆಹಲಿ, ಜು 17 (DaijiworldNews/HR): ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಅಭ್ಯರ್ಥಿಯನ್ನಾಗಿ ಮಾರ್ಗರೆಟ್ ಆಳ್ವಾ ಅವರನ್ನು ಆಯ್ಕೆಮಾಡಲಾಗಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾನುವಾರ ಘೋಷಿಸಿದ್ದಾರೆ.
ಭಾರತೀಯ ಜನತಾ ಪಕ್ಷವು(ಬಿಜೆಪಿ) ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲರಾದ ಜಗದೀಪ್ ಧಂಕರ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ನಿನ್ನೆ ಆಯ್ಕೆ ಮಾಡಿದೆ.
ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಮಾರ್ಗರೇಟ್ ಆಳ್ವಾ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಪದವಿ ಪಡೆದರು ಮತ್ತು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ವಕೀಲೆಯಾಗಿ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
80 ರ ಹರೆಯದ ಮಾರ್ಗರೇಟ್ ಆಳ್ವಾ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ, ಗೋವಾ, ಗುಜರಾತ್,ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲೆಯಾಗಿ ಆಗಿ ಆಗಸ್ಟ್ 2014 ರಲ್ಲಿ ತನ್ನ ಅಧಿಕಾರಾವಧಿಯ ಅಂತ್ಯದವರೆಗೆ ಸೇವೆ ಸಲ್ಲಿಸಿದ ಹಿರಿಯ ಕಾಂಗ್ರೆಸ್ ನಾಯಕಿ.ರಾಜ್ಯ ಸಭೆ, ಲೋಕ ಸಭಾ ಸದಸ್ಯೆಯಾಗಿ, ಕೇಂದ್ರ ಸಚಿವೆಯಾಗಿ ಕೆಲಸ ಮಾಡಿದ ಸುದೀರ್ಘ ರಾಜಕೀಯ ಮತ್ತು ಆಡಳಿತ ಅನುಭವ ಹೊಂದಿದ್ದಾರೆ.
ಇನ್ನು ಉಪರಾಷ್ಟ್ರಪತಿ ಚುನಾವಣೆಗೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದ್ದು, ಜುಲೈ 5 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜುಲೈ 19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.