ಬೆಂಗಳೂರು, ಜು 17 (DaijiworldNews/DB): ಸುಪ್ರೀಂ ಕೋರ್ಟ್ನ ಘನವೆತ್ತ ಮುಖ್ಯ ನ್ಯಾಯಮೂರ್ತಿಗಳಾದ ರಮಣ ಅವರು ಜೈಪುರದ ಸಭೆಗಳಲ್ಲಿ ಪ್ರತಿಪಕ್ಷಗಳು ಮತ್ತು ವಿಚಾರಣಾಧೀನ ಕೈದಿಗಳ ಬಗ್ಗೆ ಪ್ರಸ್ತಾಪಿಸಿರುವ ಮಹತ್ವದ ಅಂಶಗಳ ಬಗ್ಗೆ ನನ್ನ ಸಹಮತ ಇದೆ. ಅದಕ್ಕಾಗಿ ನಾನು ಮಾನ್ಯ ಮುಖ್ಯ ನ್ಯಾಯಮೂರ್ತಿಗಳನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ .ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸ್ವಾತಂತ್ರ್ಯ ಭಾರತದಲ್ಲಿ ನಾವು 75 ವರ್ಷ ಸಾಗಿದ್ದೇವೆ. ಈ ಸಂದರ್ಭದಲ್ಲಿ ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಸಿ ಹೇಳಿರುವ ಮಾತುಗಳನ್ನು ಎಲ್ಲರೂ ಕೇಳಲೇಬೇಕು. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ-ಪ್ರತಿಪಕ್ಷಗಳ ಜುಗುಲ್ ಬಂದಿ ಇದ್ದರೆ ದೇಶಕ್ಕೆ ಶ್ರೇಯಸ್ಸು ಎಂದು ಅಭಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವಿಚಾರಣೆಯೇ ಇಲ್ಲದೆ ದೀರ್ಘಕಾಲ ಬಂಧನದಲ್ಲಿ ಇರಿಸುವುದೂ ಒಂದು ಶಿಕ್ಷೆಯೇ ಸರಿ. ಆತುರ, ವಿವೇಚನೆ ಇಲ್ಲದ ಬಂಧನಗಳು, ಜಾಮೀನು ಪಡೆಯುವಲ್ಲಿನ ಕಷ್ಟಗಳ ಬಗ್ಗೆಯೂ ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮಾನ್ಯ ಮುಖ್ಯ ನ್ಯಾಯಮೂರ್ತಿಗಳ ಮಾತುಗಳು ಹೊಣೆಗೇಡಿತನದ ಆಡಳಿತದ ಕಣ್ತೆರೆಸಲಿ ಎಂದು ಎಚ್ಡಿಕೆ ಬರೆದುಕೊಂಡಿದ್ದಾರೆ.