ನವದೆಹಲಿ, ಜು 17 (DaijiworldNews/DB): ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಆಗಮಿಸದಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ಗೈರು ಹಾಜರಿ ಅಸಂಸದೀಯ ಅಲ್ಲವೇ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಮುಂಬರುವ ಸಂಸತ್ತಿನ ಅಧಿವೇಶದ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ಸರ್ವ ಪಕ್ಷ ಸಭೆ ಇಂದು ನಡೆಯುತ್ತಿದೆ. ಆದರೆ ಇದಕ್ಕೆ ಪ್ರಧಾನಿ ಎಂದಿನಂತೆ ಗೈರು ಹಾಜರಾಗಿರುವುದು ಅಸಂಸದೀಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಚಿವ ರಾಜನಾಥ್ ಸಿಂಗ್, ರಾಜ್ಯಸಭೆಯ ಬಿಜೆಪಿಯ ನಾಯಕ ಪಿಯೂಷ್ ಗೋಯಲ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತಿತರರು ಸರ್ಕಾರವನ್ನು ಪ್ರತಿನಿಧಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ, ಜೈರಾಮ್ ರಮೇಶ್, ಡಿಎಂಕೆಯ ಟಿ.ಆರ್. ಬಾಲು, ತಿರುಚಿ ಶಿವ, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಎನ್ಸಿಪಿಯ ಶರದ್ ಪವಾರ್ ಸೇರಿದಂತೆ ವಿವಿಧ ನಾಯಕರು ಉಪಸ್ಥಿತರಿದ್ದರು. ಬಿಜೆಡಿಯ ಪಿನಾಕಿ ಮಿಶ್ರಾ, ವೈಎಸ್ಆರ್ಸಿಪಿಯ ವಿಜಯಸಾಯಿ ರೆಡ್ಡಿ, ಮಿಥುನ್ ರೆಡ್ಡಿ, ಟಿಆರ್ಎಸ್ನ ಕೇಶವ ರಾವ್, ನಾಮ ನಾಗೇಶ್ವರ್ ರಾವ್, ಆರ್ಜೆಡಿಯ ಎಡಿ ಸಿಂಗ್, ಶಿವಸೇನೆಯ ಸಂಜಯ್ ರಾವುತ್ ಭಾಗವಹಿಸಿದ್ದರು. ಆದರೆ ಪ್ರಧಾನಿ ಮೋದಿ ಮಾತ್ರ ಸರ್ವಪಕ್ಷ ಸಭೆಗೆ ಗೈರಾಗಿದ್ದರು. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18ರಂದು ಆರಂಭವಾಗಲಿದ್ದು, ಆಗಸ್ಟ್ 12ರಂದು ಕೊನೆಗೊಳ್ಳಲಿದೆ. ಸಂಸತ್ ಅಧಿವೇಶನಕ್ಕೂ ಮುನ್ನ ಕೆಲ ಅಸಂಸದೀಯ ಪದಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ.