ಹೊಸಪೇಟೆ (ವಿಜಯನಗರ), ಜು 14 (DaijiworldNews/DB): ಬಡ ಹಿಂದೂಗಳ ಸಂಕಷ್ಟಕ್ಕೆ ಮಿಡಿಯುತ್ತಾರೆಂಬ ಭರವಸೆಯಿಂದ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೆವು. ಆದರೆ ಇದೀಗ ಆ ವಿಚಾರಕ್ಕಾಗಿ ಪಶ್ಚಾತ್ತಾಪ ಪಡುವಂತಾಗಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿಷಾದಿಸಿದ್ದಾರೆ.
ವಿಜಯನಗರದ ಹೊಸಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಬಿಜೆಪಿ ದಾರಿ ತಪ್ಪಿದೆ. ಹಿಂದೂಗಳಿಗೆ ಅನ್ಯಾಯವಾದರೂ ಮೌನವಹಿಸಿದೆ. ಹಿಂದೂಗಳ ಪಕ್ಷ ಅಂದುಕೊಂಡು ಆ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಲು ಶ್ರಮಿಸಿದ್ದೆವು. ನ್ಯಾಯ ಕೇಳಲು ಹೋದ ಶಿವಮೊಗ್ಗದ ಹರ್ಷ ಸಹೋದರಿ ಮತ್ತು ತಾಯಿಯೊಂದಿಗೆ ಗೃಹ ಸಚಿವರು ವರ್ತಿಸಿದ ರೀತಿ ಸರಿಯಿಲ್ಲ. ಅದೇ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವವರಿಗೆ ಬಿರಿಯಾಣಿ ಕೊಟ್ಟು ಸಾಕುತ್ತಿದ್ದಾರೆ ಎಂದು ಆಪಾದಿಸಿದರು.
ಜಾನುವಾರು ಹತ್ಯೆ ಮತ್ತು ಪ್ರತಿಬಂಧಕ ಕಾಯ್ದೆ ವರ್ಷದ ಹಿಂದೆ ಜಾರಿಯಾಗಿದೆ. ಮತಾಂತರ ಕಾಯ್ದೆ ಆರು ತಿಂಗಳ ಹಿಂದೆ ಜಾರಿಯಾಗಿದೆ. ಆದರೆ ಗೋಹತ್ಯೆ, ಮತಾಂತರ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಸರ್ಕಾರ ಕಾನೂನು ಜಾರಿಗೊಳಿಸಿ ಸುಮ್ಮನೆ ಕುಳಿತಿದೆ. ನಿಮಗೆ ಆಗದೇ ಇದ್ದಲ್ಲಿ ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸರ್ಕಾರವನ್ನು ಅವರು ಎಚ್ಚರಿಸಿದರು.
ರಾಜ್ಯದಲ್ಲಿ ಮೂರು ಸಾವಿರ ಚರ್ಚ್ಗಳು ಕಾನೂನುಬಾಹಿರವಾಗಿ ನಡೆಯುತ್ತಿದ್ದು, ಅಲ್ಲಿ ನಿತ್ಯ ಮತಾಂತರ ಚಟುವಟಿಕೆಗಳು ನಡೆಯುತ್ತಿರುವುದಾಗಿ ನಮ್ಮ ಸಂಘಟನೆಯ ಸರ್ವೇ ಹೇಳಿದೆ. ಸರ್ಕಾರದ ಗಮನಕ್ಕೆ ಇದು ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಚುನಾವಣೆ ವರ್ಷ ಎಂಬುದನ್ನು ಬಿಜೆಪಿ ಮರೆಯದಿರಲಿ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿಯಾಗದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಉತ್ತರಾದಿ ಮಠದ ಗೋಪಿನಾಥ ಆಲೂರು, ಶ್ರೀರಾಮ ಸೇನೆ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ, ಮುಖಂಡರಾದ ಜಗದೀಶ ಕಮಾಟಗಿ, ರವಿ ಬಡಿಗೇರ್, ಸೂರಿ ಬಂಗಾರು, ಅನೂಪ್ ಕುಮಾರ್ ಉಪಸ್ಥಿತರಿದ್ದರು.