ನವದೆಹಲಿ, ಜು 14 (DaijiworldNews/DB): ಎನ್ಡಿಎ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ದ್ರೌಪದಿ ಮುರ್ಮು ಭಾರತದ ರಾಕ್ಷಸೀತತ್ವದ ಪ್ರತೀಕವಾಗಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ನಾಯಕ ಅಜಯ್ಕುಮಾರ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಅಜಯ್ಕುಮಾರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಮುರ್ಮು ಅವರನ್ನು ರಾಕ್ಷಸಿತತ್ವದ ಪ್ರತೀಕ ಎನ್ನುವ ಮೂಲಕ ಅಜಯ್ಕುಮಾರ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮುರ್ಮು ಪ್ರತಿನಿಧಿಸುವ ಆದಿವಾಸಿ ಸಮುದಾಯಕ್ಕೂ ಅವರ ಹೇಳಿಕೆ ಅವಮಾನವನ್ನುಂಟು ಮಾಡಿದೆ. ಕೂಡಲೇ ಅಜಯ್ಕುಮಾರ್ ದೇಶದ ಆದಿವಾಸಿ ಸಮುದಾಯದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.
ಬಿಜೆಪಿ ನಾಯಕ ಅಮಿತ್ ಮಾಳವಿಯಾ ಹೇಳಿಕೆ ನೀಡಿ, ಮುರ್ಮು ಅವರನ್ನು ಪ್ರಧಾನಿ ಮೋದಿ ಅವರೇ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಆದಿವಾಸಿ ಸಮುದಾಯದ ಸಬಲೀಕರಣ ನಿಟ್ಟಿನಲ್ಲಿ ಪಕ್ಷವು ಈ ಆಯ್ಕೆಯೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಅಜಯ್ಕುಮಾರ್ ಅವರಿಗೆ ಇದು ರಕ್ಕಸತತ್ವದ ಪ್ರತೀಕದಂತೆ ಕಂಡಿರುವುದು ವಿಷಾದನೀಯ. ಅವರ ಹೇಳಿಕೆ ಇಡೀ ಆದಿವಾಸಿ ಸಮುದಾಯಕ್ಕೇ ಅವಮಾನ ತರಿಸುವಂತಿದ್ದು, ಕೂಡಲೇ ಆ ಸಮುದಾಯದ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಕುಮಾರ್ ಹೇಳಿದ್ದೇನು?
ಭಾರತದಲ್ಲಿ ಪರಿಶಿಷ್ಟ ವರ್ಗಗಳ ಪರಿಸ್ಥಿತಿ ತುಂಬಾ ಕೆಳಮಟ್ಟದಲ್ಲಿದೆ. ಮುರ್ಮು ಉತ್ತಮ ವ್ಯಕ್ತಿಯಾದರೂ, ತುಂಬಾ ಸಂಕಷ್ಟದಲ್ಲಿರುವ ಸಮುದಾಯಗಳ ಪ್ರತಿನಿಧಿಯಾಗಿ ಕಾಣುವ ಅವರು ಭಾರತದ ರಾಕ್ಷಸಿ ತತ್ವದ ಪ್ರತೀಕವಾಗಿದ್ದಾರೆ. ಹೀಗಾಗಿ ಅವರನ್ನು ಆದಿವಾಸಿಗಳ ಪ್ರತೀಕ ಎಂಬಂತೆ ಮಾತ್ರ ಬಿಂಬಿಸಿದರೆ ತಪ್ಪಾಗುತ್ತದೆ ಎಂದು ಅಜಯ್ಕುಮಾರ್ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು.