ಬೆಂಗಳೂರು, ಜು 13 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿದೇಶ ಪ್ರವಾಸದ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ, ಕಾಂಗ್ರೆಸಿಗರಿಗೊಂದು ಕ್ವಿಜ್ ಎಂಬ ಶೀರ್ಷಿಕೆಯಡಿ ರಾಹುಲ್ ಎಲ್ಲಿದ್ದೀಯಪ್ಪಾ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಸರಣಿ ಟ್ವೀಟ್ ಮತ್ತು ಕೂ ಮಾಡಿದೆ.
ಕಾಂಗ್ರೆಸ್ ಪಕ್ಷದ ಮಹತ್ವದ ಸಭೆಗೆ ಮುಹೂರ್ತ ನಿಗದಿಯಾದಾಗ ರಾಹುಲ್ ಗಾಂಧಿ ವಿದೇಶ ಪ್ರವಾಸ ತೆರಳುತ್ತಾರೋ? ಅಥವಾ ರಾಹುಲ್ ಗಾಂಧಿ ವಿದೇಶಕ್ಕೆ ಪ್ರವಾಸಕ್ಕೆ ತೆರಳಿದಾಗ ಕಾಂಗ್ರೆಸ್ ಸಭೆ ನಿಗದಿಯಾಗುತ್ತದೆಯೋ? ಎಂದು ಬಿಜೆಪಿ ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿರುವಾಗಲೆಲ್ಲ ಪಕ್ಷ ಕರೆಯುವ ಪ್ರಮುಖ ಸಭೆಗಳಿಗೂ ಮುನ್ನ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಲಂಡನ್, ನೇಪಾಳ, ಇಟಲಿ ಹೀಗೆ ವರ್ಷದಾದ್ಯಂತ ತಿರುಗಾಡುವ ರಾಹಲ್ ಗಾಂಧಿಗೆ ವಯನಾಡಿಗೆ ತೆರಳಲು ಸಮಯವೇ ಇಲ್ಲ. ಅಮೇಥಿಯ ಫಲಿತಾಂಶ ವಯನಾಡಿನಲ್ಲೂ ಮರುಕಳಿಸುವುದು ಸ್ಪಷ್ಟ ಎಂದು ಬಿಜೆಪಿ ಹೇಳಿದೆ.
ತನ್ನದೇ ಪಕ್ಷದ ನೀತಿ-ನಿರೂಪಣಾ ಸಭೆಗೆ ಚಕ್ಕರ್ ಹಾಕುವ ವ್ಯಕ್ತಿಯಿಂದ ರಾಷ್ಟ್ರ ಮುನ್ನಡೆಸಲು ಸಾಧ್ಯವೇ? ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿ ಬ್ಯುಸಿ ಇರುವುದರಿಂದ ಭಾರತ್ ಜೋಡೋ ಯಾತ್ರೆಯ ಸಿದ್ಧತಾ ಸಭೆಯನ್ನು ಯುರೋಪ್ಗೆ ವರ್ಗಾಯಿಸಲಾಗುತ್ತದೆಯೇ? ಪಂಜಾಬ್, ಉತ್ತರ ಪ್ರದೇಶ ಚುನಾವಣೆಗಳಲ್ಲಿ ಸೋತ ನಂತರ ಕೊನೆಯ ಪಕ್ಷ ಸೋಲಿನ ಅವಲೋಕನ, ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬಹುದಿತ್ತು. ಆದರೆ ಕಾಂಗ್ರೆಸ್ ಯುವರಾಜ ನೇಪಾಳಕ್ಕೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದರು. ಇಂತಹ ನಾಯಕತ್ವ ಹೊಂದಿರುವ ಪಕ್ಷ ಭಾರತದಿಂದ ಮುಕ್ತವಾಗದಿರಲು ಯಾವ ಕಾರಣಗಳಿವೆ? ಎಂದು ಬಿಜೆಪಿ ವ್ಯಂಗ್ಯವಾಗಿ ಪ್ರಶ್ನಿಸಿದೆ.
ಅಕ್ಟೋಬರ್ ತಿಂಗಳಲ್ಲಿ ಭಾರತ್ ಜೋಡೋ ಯಾತ್ರೆ, ಉಳಿದ ಎಲ್ಲಾ ತಿಂಗಳು ಭಾರತದಿಂದ ವಿದೇಶಕ್ಕೆ ಓಡೋ ಯಾತ್ರೆ! ನಕಲಿ ಗಾಂಧಿ ವಂಶದ ಕುಡಿಯ ರಾಜಕಾರಣ ಎಂದು ಲೇವಡಿ ಮಾಡಿರುವ ಬಿಜೆಪಿ, ಸೋಲು ಹಾಗೂ ಸಿದ್ಧತೆ ಎಂದರೆ ರಾಹುಲ್ ಗಾಂಧಿ ಅವರಿಗೆ ಬೇಸರವೇ? ಏಕೆಂದರೆ, ಪಂಜಾಬ್, ಯುಪಿ ಚುನಾವಣೆ ಸೋತಾಗ ನೇಪಾಳ ಯಾತ್ರೆ. ಅಗ್ನಿವೀರ್ ಟೂಲ್ ಕಿಟ್ ಮಕಾಡೆ ಬಿದ್ದಾಗ ಲಂಡನ್ ಜಾತ್ರೆ. ಗೋವಾ ಕಾಂಗ್ರೆಸ್ ಇಕ್ಕಟ್ಟಿಗೆ ಸಿಕ್ಕಾಗ ಯುರೋಪ್ ಮಾತ್ರೆ. ವ್ಹಾವ್, ಉತ್ತರ ಕುಮಾರ ರಾಹುಲ್ ಎಂದು ಬಿಜೆಪಿ ರಾಹುಲ್ ಕಾಳೆದಿದೆ.