ಬೆಂಗಳೂರು,ಜು 12 (DaijiworldNews/MS): ಸಾಕ್ಷ್ಯಚಿತ್ರ ʼಕಾಳಿʼಯಲ್ಲಿ ಹಿಂದೂ ದೇವತೆ ಕಾಳಿ ಸಿಗರೇಟ್ ಸೇದುತ್ತಿರುವಂತೆ ಬಿಂಬಿಸಿರುವುದನ್ನು ನಿರ್ಬಂಧಿಸಲು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರರಿಗೆ ಸಮನ್ಸ್ ಮತ್ತು ನಿರ್ಬಂಧಕಾಜ್ಞೆ ನೋಟಿಸ್ ನೀಡಿದೆ.
ಮಣಿಮೇಕಲೈ ವಿರುದ್ಧ ವಕೀಲ ರಾಜ್ ಗೌರವ್ ಅವರು ಮೊಕದ್ದಮೆ ಹೂಡಿದ್ದು, ಮಣಿಮೇಖಲೈ ಅವರು ಹಿಂದೂ ದೇವತೆಯನ್ನು ತುಂಬಾ ‘ಅಸಭ್ಯವಾಗಿʼ ಚಿತ್ರಿಸಿದ್ದು ಪೋಸ್ಟರ್ ಮತ್ತು ಪ್ರಚಾರ ವೀಡಿಯೊದಲ್ಲಿ ದೇವತೆ ಸಿಗರೇಟ್ ಸೇದುತ್ತಿರುವುದನ್ನು ತೋರಿಸಿದ್ದಾರೆ. ಇದು ಸಾಮಾನ್ಯ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ, ನೈತಿಕತೆ ಮತ್ತು ಸಭ್ಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ದೂರು ನೀಡಿದ್ದರು.
ಪ್ರತಿವಾದಿಯ ವಿರುದ್ಧ ಯಾವುದೇ ಆದೇಶ ನೀಡುವ ಮೊದಲು ಅವರ ವಿಚಾರಣೆ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು ಪ್ರಕರಣವನ್ನು ಆಗಸ್ಟ್ 6ಕ್ಕೆ ಮುಂದೂಡಲಾಗಿದೆ.. ಈ ಹಿನ್ನೆಲೆಯಲ್ಲಿ ಮಣಿಮೇಕಲೈ ಅವರ ಟೂರಿಂಗ್ ಟಾಕೀಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ಗೆ ಸಮನ್ಸ್ ಮತ್ತು ನೋಟಿಸ್ ನೀಡಲಾಗಿದೆ.
ದೂರುದಾರರು ಮಣಿಮೇಕಲೈ ಮತ್ತು ಇತರರ ವಿರುದ್ಧ ಶಾಶ್ವತ ಮತ್ತು ಕಡ್ಡಾಯ ತಡೆಯಾಜ್ಞೆ ಮೊಕದ್ದಮೆ ಹೂಡಿದ್ದಾರೆ.