ಬೆಂಗಳೂರು,ಜು 09 (DaijiworldNews/HR): ಕೆ.ಜೆ.ಜಾರ್ಜ್ ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬರು. ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾಗ ನಾಗರಿಕರ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲಿಸುವಂತೆ ಬಿಬಿಎಂಪಿಗೆ ಆದೇಶಿಸಿದ್ದರು. ಆದರೆ ತಮ್ಮ ಸ್ವಂತ ಕಂಪನಿ ಎಂಬೆಸಿ ತೆರಿಗೆ ಬಾಕಿ ಇಟ್ಟುಕೊಂಡಿದ್ದರು ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವಿಟ್ ಮಾಡಿರುವ ಕರ್ನಾಟಕ ಬಿಜೆಪಿ, ಒಬ್ಬ ಟಿಂಬರ್ ವ್ಯಾಪಾರಿ ಬೆಂಗಳೂರು ಅಭಿವೃದ್ಧಿ ಮಂತ್ರಿಯಾದರು. ಹೆಸರಿಗೆ ಮಾತ್ರ ಬೆಂಗಳೂರು ಅಭಿವೃದ್ಧಿ ಮಂತ್ರಿ, ಅಭಿವೃದ್ಧಿಯಾಗಿದ್ದು ಮಾತ್ರ ಜಾರ್ಜ್! ಅದೇ ಹಣಭಕ್ಷಕ ಜಾರ್ಜ್ ಈಗ ಕಾಂಗ್ರೆಸ್ ಪಕ್ಷದ ಹಣಕಾಸು ಸಂಚಾಲಕ. ಬೇನಾಮಿ ಹಣದ ಲೆಕ್ಕಿಡುವುದರಲ್ಲಿ ಜಾರ್ಜ್ಗೆ ಸರಿಸಾಟಿ ಬೇರೆ ಯಾರೂ ಇಲ್ಲ ಬಿಡಿ ಎಂದಿದೆ.
ಇನ್ನು ಕೆಪಿಸಿಸಿಯ ಹಣಕಾಸು ಸಮಿತಿಗೆ ಕೆ.ಜೆ. ಜಾರ್ಜ್ ಹಾಗೂ ವಿನಯ್ ಕಾರ್ತಿಕ್ ಅವರನ್ನು ನೇಮಕ ಮಾಡಲಾಗಿದೆ. ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬೇನಾಮಿ ಆಸ್ತಿಯ ಸೂತ್ರದಾರರು ಇವರೇ ಅಲ್ಲವೇ? ಪಕ್ಷದಲ್ಲಿ ಅಕ್ರಮ ಆಸ್ತಿಯ ಸಮಾನ ಹಂಚಿಕೆ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದೆ.