ನವದೆಹಲಿ, ಜು 09 (DaijiworldNews/DB): ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದರೊಂದಿಗೆ ಎನ್ಸಿಪಿಯೊಂದಿಗಿನ ಮೈತ್ರಿ ಕಡಿದುಕೊಳ್ಳಿ ಎಂದು ಉದ್ದವ್ ಠಾಕ್ರೆ ಅವರಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಅವರು ಕೇಳದ ಕಾರಣ ಸರ್ಕಾರ ಮುರಿದುಬೀಳಲು ಕಾರಣವಾಯಿತು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಸಂಬಂಧ ಡಿಸಿಎಂ ದೇವೇಂದ್ರ ಫಡ್ನವಿಸ್ ಜೊತೆ ದೆಹಲಿ ಪ್ರವಾಸ ಕೈಗೊಂಡಿರುವ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹಾ ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಸರ್ಕಾರ ಮುರಿದು ಬೀಳಲು ಕಾರಣವನ್ನು ಹೇಳಿದ ಅವರು, ಯಾವೊಬ್ಬ ಸಚಿವ, ಶಾಸಕರಿಗೂ ಅಘಾಡಿ ಸರ್ಕಾರ ಇಷ್ಟವಿರಲಿಲ್ಲ. ಎನ್ಸಿಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳಲು ಮತ್ತು ಸಾಂಪ್ರದಾಯಿಕ ಮೈತ್ರಿಗೆ ಹಿಂತಿರುಗಲು ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಅವರು ಅದಕ್ಕೆ ಸಿದ್ದವಿರಲಿಲ್ಲ. ಇದೇ ಸರ್ಕಾರ ಪತನಗೊಳ್ಳಲು ಕಾರಣ ಎಂದರು.