ಬೆಂಗಳೂರು, ಜು 05 (DaijiworldNews/DB): ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಸಂಸದ ಬಿ.ವೈ. ವಿಜಯೇಂದ್ರ ಭಾಗಿಯಾಗಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ವಿಜಯೇಂದ್ರರು ಈ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ನನಗೆ ಬಂದಿದೆ. ಸಚಿವ ಅಶ್ವತ್ಥ ನಾರಾಯಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಎಸಿಬಿ ಎಂಬುದು ಆಂಟಿ ಕರಪ್ಷನ್ ಬ್ಯೂರೋ ಹೋಗಿ ಕಲೆಕ್ಷನ್ ಬ್ಯೂರೋ ಆಗಿದೆ. ನ್ಯಾಯಾಧೀಶರನ್ನೇ ವರ್ಗಾವಣೆ ಮಾಡುವುದಾಗಿ ಹೆದರಿಸುವ ಪರಿಸ್ಥಿತಿ ರಾಜ್ಯದಲ್ಲಿದೆ. ಅವರಿಗೇ ರಕ್ಷಣೆ ಇಲ್ಲದಂತಾಗಿದೆ. ಎಸಿಬಿಯನ್ನು ಹುಟ್ಟು ಹಾಕಿರುವುದು ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಲಿ, ಭ್ರಷ್ಟರಿಗೆ ಶಿಕ್ಷೆಯಾಗಲಿ ಎಂದು. ಆದರೆ, ವ್ಯವಸ್ಥೆಯೇ ಭ್ರಷ್ಟವಾದರೆ ಏನು ಮಾಡುವುದು ಎಂದವರು ಪ್ರಶ್ನಿಸಿದರು.
ಜಮೀರ್ ಅಹಮ್ಮದ್ ನಿವಾಸದ ಮೇಲೆ ಯಾವ ಕಾರಣಕ್ಕಾಗಿ ಎಸಿಬಿ ದಾಳಿ ನಡೆಸಿದೆಯೋ ಗೊತ್ತಿಲ್ಲ. ದಾರಿ ತಪ್ಪಿಸುವುದಕ್ಕಾಗಿ ಈ ದಾಳಿ ನಡೆದಿರಬಹುದೇನೋ. ಎಸಿಬಿ ಸಿಎಂ ನಿಯಂತ್ರಣದಲ್ಲಿದೆ. ಮತ್ತೇನು ಮಾಡಲು ಸಾಧ್ಯ ಎಂದರು.