ಜಾರ್ಖಂಡ್, ಜು 05 (DaijiworldNews/HR): ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಎಟಿಎಂ ಮೆಷಿನ್ ಪಾಯಿಂಟ್ನಲ್ಲಿ ದರೋಡೆ ನಡೆಯುವುದನ್ನು ನಾಯಿಯೊಂದು ತಡೆದು ಬರೋಬ್ಬರಿ 27 ಲಕ್ಷ ಉಳಿಸಿರುವ ಘಟನೆ ನಡೆದಿದೆ.
ಜಾರ್ಖಂಡ್ದ ಚೌಪರಾನ್ ಪೊಲೀಸ್ ಠಾಣೆಯ ಚೈತಿ ಗ್ರಾಮದ ಜಿಟಿ ರಸ್ತೆಯಲ್ಲಿರುವ ಮನೆಯೊಂದರ ನೆಲ ಮಹಡಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ರಾತ್ರಿ ವೇಳೆ ಗ್ಯಾಸ್ ಕಟರ್, ಎಲ್ಪಿಜಿ ಸಿಲಿಂಡರ್ ಮತ್ತು ಸುತ್ತಿಗೆಯೊಂದಿಗೆ ದರೋಡೆಕೋರರ ತಂಡವೊಂದು ದರೋಡೆ ನಡೆಸಲು ಬಂದಿದ್ದು, ದರೋಡೆಕೋರರು ಎಟಿಎಂನಿಂದ ಹಣ ಕದ್ದೇ ಬಿಟ್ಟರು ಎಂಬಷ್ಟರಲ್ಲಿ ನಾಯಿಯೊಂದು ದರೋಡೆಯನ್ನು ತಡೆದು 27 ಲಕ್ಷ ಹಣವನ್ನು ಉಳಿಸಿದೆ.
ಇನ್ನು ಈ ಎಟಿಎಂ ಇರುವ ಮನೆ ಸುಧೀರ್ ಬರ್ನ್ವಾಲ್ ಎಂಬವರ ಒಡೆತನದಲ್ಲಿದ್ದು, ದರೋಡೆಕೋರರು ಎಟಿಎಂ ಬಳಿ ಕಸರತ್ತು ನಡೆಸುತ್ತಿರುವುದನ್ನು ಗಮನಿಸಿದ ಬರ್ನ್ವಾಲ್ ಅವರ ಸಾಕು ನಾಯಿ ಸಾಂಬಾ ಬೊಗಳಲು ಪ್ರಾರಂಭಿಸಿದ್ದು, ಅಷ್ಟು ಹೊತ್ತಿಗಾಗಲೇ ದರೋಡೆಕೋರರು ಯಂತ್ರವನ್ನು ಬಹುತೇಕ ಕತ್ತರಿಸುವುದನ್ನು ಮುಗಿಸಿದ್ದರು. ಆದರೆ ನಾಯಿ ಜೋರಾಗಿ ಕೂಗುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಹೊರಗೆ ಬಂದಿದ್ದಾರೆ. ಹೀಗೆ ಜನರು ಎಚ್ಚರಗೊಂಡು ಹೊರಗಡೆ ಬಂದಿದ್ದನ್ನು ಕಂಡು ಎಟಿಎಂ ಹಣ ಕದಿಯಲು ಬಂದಿದ್ದ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.