ನವದೆಹಲಿ, ಜು 03 (DaijiworldNews/DB): ಜನರು ದೇಶವನ್ನು ಒಗ್ಗೂಡಿಸುವ ಬಗ್ಗೆ ಯೋಚಿಸಬೇಕೇ ಹೊರತು ದೇಶ ವಿಭಜನೆಯಂತಹ ವಿಚಾರಗಳನ್ನು ಯೋಚಿಸಬಾರದು ಎಂದು ಸುಪ್ರೀಂಕೊರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಸಲಹೆ ಮಾಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಸೋಸಿಯೇಷನ್ ಆಫ್ ಇಂಡಿಯನ್ ಅಮೆರಿಕನ್ಸ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಳಗೊಳ್ಳುವಿಕೆಯು ಏಕತೆಗೆ ಕಾರಣವಾಗುತ್ತದೆ. ದೇಶದ ಅಭಿವೃದ್ದಿ ಮತ್ತು ಸೌಹಾರ್ದ, ಶಾಂತಿಯ ದೃಷ್ಟಿಯಿಂದ ಇದು ತುಂಬಾ ಅಗತ್ಯವಾಗಿದೆ. ಸಂಕುಚಿತ, ಒಡಕುಂಟು ಮಾಡುವಂತಹ ಸಮಸ್ಯೆಗಳು ಪ್ರಸ್ತುತ ಹೆಚ್ಚುತ್ತಿದ್ದು, ಅವನ್ನು ನಿಯಂತ್ರಿಸಿ ಏಕತೆ ಮೆರೆಯಲು ಮುಂದಾಗಬೇಕಾದುದು ಇಂದಿನ ಅಗತ್ಯವಾಗಿದೆ. ಇಲ್ಲವಾದರೆ ವಿಪತ್ತಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.
ಎಷ್ಟೇ ಶ್ರೀಮಂತಿಕೆ ಇದ್ದರೂ ಅದನ್ನು ಅನುಭವಿಸಬೇಕಾದರೆ ಸುತ್ತಲಿನ ಸಮಾಜ ಶಾಂತಿಯಿಂದ ಕೂಡಿರಬೇಕ ಎಂದವರು ಇದೇ ವೇಳೆ ತಿಳಿಸಿದರು.
ಸರ್ಕಾರದ ಎಲ್ಲಾ ಕ್ರಮಗಳೂ ನ್ಯಾಯಾಂಗ ಅನುಮೋದನೆಗೆ ಅರ್ಹ ಎಂದು ನಿರೀಕ್ಷಿಸುವುದಾಗಲೀ, ರಾಜಕೀಯ ನಿಲುವು ಮತ್ತು ಕಾರಣಗಳನ್ನು ನ್ಯಾಯಾಂಗ ಮುನ್ನಡೆಸಬೇಕೆಂಬ ಪ್ರತಿಪಕ್ಷಗಳ ಅಪೇಕ್ಷೆಯಾಗಲೀ ಎರಡೂ ಸರಿಯಲ್ಲ. ಈ ದೋಷಪೂರಿತ ಚಿಂತನೆಗಳು ಬೆಳೆಯುವುದೇ ತಪ್ಪು ಎಂದವರು ಇದೇ ವೇಳೆ ತಿಳಿಸಿದರು.