ತುಮಕೂರು, ಜು 02 (DaijiworldNews/DB): ಗ್ರಾಮ ಪಂಚಾಯತ್ ಸದಸ್ಯನೋರ್ವ ಪಂಚಾಯತ್ ಕಚೇರಿಯಲ್ಲೇ ಪಿಡಿಒ ಕೈಗೆ ಚುಂಬಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರ ಗ್ರಾಮ ಪಂಚಾತ್ನಲ್ಲಿ ನಡೆದಿದೆ.
ಸಚಿವ ಮಾಧುಸ್ವಾಮಿ ಅವರ ತವರು ಕ್ಷೇತ್ರ ಇದಾಗಿದೆ. ಸದಸ್ಯ ಪ್ರಸನ್ನ ಎಂಬಾತನು ಪಿಡಿಒ ಕೋಕಿಲಾ ಎಂಬವರನ್ನು ಕೈ ಹಿಡಿದು ಚುಂಬಿಸಿದ್ದಾರೆ. ಘಟನೆಯು ಪಂಚಾಯತ್ ಕಚೇರಿಯಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಇನ್ನೊಂದು ದೃಶ್ಯದಲ್ಲಿ ಪ್ರಸನ್ನ ಬಲವಂತವಾಗಿ ಪಿಡಿಒ ಅವರ ಕೈ ಹಿಡಿದೆಳೆದು ಮುತ್ತು ನೀಡಿದ್ದಾನೆ.
ಘಟನೆ ಕಳೆದ ಕೆಲವು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪಂಚಾಯತ್ ಕಚೇರಿಯಲ್ಲಿ ಪಂಚಾಯತ್ ಸದಸ್ಯ ಅನುಚಿತವಾಗಿ ನಡೆದುಕೊಂಡಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.