ಅಮರಾವತಿ, ಜು 02 (DaijiworldNews/DB): ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ವಿಚಾರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯಾಗಿರುವ ಬೆನ್ನಲ್ಲೇ ಇನ್ನೊಂದು ಕೊಲೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.
ಮೆಡಿಕಲ್ ಶಾಪ್ವೊಂದರ ಮಾಲಕ, ಮಹಾರಾಷ್ಟ್ರದ ಅಮರಾವತಿಯ ಉಮೇಶ್ ಕೊಲ್ಲೆ (54) ಅವರು ಹತ್ಯೆಗೊಳಗಾದವರು. ಉಮೇಶ್ ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದರಿಂದ ಕೆರಳಿದ್ದ ದುಷ್ಕರ್ಮಿಗಳು ಜೂನ್ 21ರಂದು ಉಮೇಶ್ ಕೊಲ್ಲೆ ಅವರನ್ನು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಈಗಾಗಲೇ 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಮುದಾಸಿನ್ ಅಹ್ಮದ್ ಹಾಗೂ ಶಾರೂಖ್ ಪಠಾಣ್ ಎಂಬಿಬ್ಬರು ಆರೋಪಿಗಳು ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಟಿವಿಯೊಂದರ ಚರ್ಚೆ ವೇಳೆ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ದ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ರಾಜಸ್ತಾನ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಜಿಹಾದಿಗಳು ಶಿರಚ್ಛೇದ ಮಾಡಿ ಹತ್ಯೆಗೈದಿದ್ದರು. ಇದಕ್ಕೂ ಮುನ್ನ ಉಮೇಶ್ ಪ್ರಹ್ಲಾದ್ ಅವರ ಕೊಲೆ ನಡೆದಿತ್ತು ಎಂದು ತಿಳಿದು ಬಂದಿದೆ.