ಬೆಂಗಳೂರು, ಜೂ 29 (DaijiworldNews/MS): ಧರ್ಮದ ಅಫೀಮ್ ತಿಂದಿರುವ ಕೋಮು ಕ್ರಿಮಿಗಳಿಗೆ ಯಾವುದೇ ಸರ್ಕಾರವಿದ್ದರೂ ಅಂಜಿಕೆಯಿರುವುದಿಲ್ಲ. ಧರ್ಮಾಂಧತೆಯ ಅಮಲು ತಲೆಗೇರಿಸಿಕೊಂಡಿರುವ ರಕ್ತಪಿಪಾಸಿಗಳು ಮಾತ್ರ ಇಂತಹ ಹೇಯ ಕೃತ್ಯ ನಡೆಸಲು ಸಾಧ್ಯ ಎನ್ನುವ ಮೂಲಕ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಉದಯಪುರ ಟೈಲರ್ ಕನ್ಹಯ್ಯಲಾಲ್ ಹತ್ಯೆ ಪ್ರಕರಣವನ್ನು ಖಂಡಿಸಿದ್ದಾರೆ.
ಕನ್ಹಯ್ಯ ಹತ್ಯೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ.ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಹತ್ಯೆಯಾಗಿದೆ ಎಂದು ಬೊಬ್ಬಿಡುತ್ತಿರುವ ಬಿಜೆಪಿ ವರ್ತನೆ ಬಾಲಿಷತನ.ಇತ್ತೀಚೆಗೆ ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಕೊಲೆಯಾಯ್ತು.ಆಗ ರಾಜ್ಯದಲ್ಲಿದಿದ್ದು ಇದೇಬಿಜೆಪಿ ಸರ್ಕಾರವಲ್ಲವೆ?ಹರ್ಷನ ಕೊಲೆಯ ಹೊಣೆಗಾರಿಕೆ ಈಗಿನ ಬಿಜೆಪಿ ಸರ್ಕಾರದ್ದೆ ಎಂದು ಪ್ರಶ್ನಿಸಿದ್ದಾರೆ.
ಧರ್ಮದ ಅಫೀಮ್ ತಿಂದಿರುವ ಕೋಮು ಕ್ರಿಮಿಗಳಿಗೆ ಯಾವುದೇ ಸರ್ಕಾರವಿದ್ದರೂ ಅಂಜಿಕೆಯಿರುವುದಿಲ್ಲ. ಇಂತಹ ಕ್ರಿಮಿಗಳನ್ನು ಯಾವುದೇ ಮುಲಾಜಿಲ್ಲದೆ ಹೆಡೆಮುರಿ ಕಟ್ಟಿ ಹುಟ್ಟಡಗಿಸಬೇಕು. ಮನುಷ್ಯತ್ವ ಮರೆತ ಇಂತಹ ಕ್ರಿಮಿಗಳ ಹುಟ್ಟಡಗಿಸಲು ಯಾರ ತಕರಾರು ಇಲ್ಲ. ಹೀಗಿರುವಾಗ ಬಿಜೆಪಿ ಪ್ರತಿ ಹತ್ಯೆಯಲ್ಲೂ ಹೆಣದ ರಾಜಕೀಯ ಮಾಡುವ ಉದ್ದೇಶವೇನು ಎಂದು ಕಿಡಿಕಾರಿದ್ದಾರೆ.
ಕನ್ಹಯ್ಯರನ್ನು ಹತ್ಯೆ ಮಾಡಿದ ಇಬ್ಬರು ಪಾತಕಿಗಳನ್ನು ರಾಜಸ್ಥಾನ ಸರ್ಕಾರ ಈಗಾಗಲೇ ಬಂಧಿಸಿದೆ.ಈ ಇಬ್ಬರು ಕಿರಾತಕರ ಕೃತ್ಯ ಯಾವ ಭಯೋತ್ಪಾದಕ ಕೃತ್ಯಕ್ಕೂ ಕಡಿಮೆಯಿಲ್ಲ. ರಾಜಸ್ಥಾನ ಸರ್ಕಾರ ಈ ದುಷ್ಟರ ವಿರುದ್ದ ತ್ವರಿತಗತಿಯ ವಿಚಾರಣೆ ನಡೆಸಿ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿ.ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಿ ಎಂದು ಒತ್ತಾಯಿಸಿದ್ದಾರೆ.