ಮನ್ನಾರ್ಕಾಡ್, ಜೂ 29 (DaijiworldNews/DB): ಹಲ್ಲುಜ್ಜದೆ ಮಗನಿಗೆ ಮುತ್ತು ಕೊಡುವುದನ್ನು ವಿರೋಧಿಸಿದ ಪತ್ನಿಯನ್ನು ಪತಿ ಕೊಲೆ ಮಾಡಿದ ಆತಂಕಕಾರಿ ಘಟನೆ ಕೇರಳದ ಮನ್ನಾರ್ಕಾಡ್ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ದೀಪಿಕಾ (28) ಕೊಲೆಯಾದ ಮಹಿಳೆ. ಕೊಲೆ ಕೃತ್ಯ ಎಸಗಿದ ಆಕೆಯ ಪತಿ ಅವಿನಾಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲುಜ್ಜದೆ ಮಗ ಐವಿನ್ಗೆ ಮುತ್ತು ನೀಡಲು ಬಂದ ಪತಿಯನ್ನು ದೀಪಿಕಾ ವಿರೋಧಿಸಿದ್ದಾಳೆ. ಹಲ್ಲುಜ್ಜದೆ ಮುತ್ತು ನೀಡಬೇಡಿ ಎಂದಿದ್ದಾಳೆ. ಇದರಿಂದ ದೀಪಿಕಾಳೊಂದಿಗೆ ಅವಿನಾಶ್ ವಾಗ್ವಾದಕ್ಕಿಳಿದಿದ್ದಾನೆ. ಜಗಳ ತಾರಕಕ್ಕೇರಿದ್ದು, ಪತ್ನಿ ದೀಪಿಕಾಳನ್ನು ಅವಿನಾಶ್ ಕೊಲೆ ಮಾಡಿದ್ದಾನೆ.
ದೀಪಿಕಾಳೊಂದಿಗೆ ಜಗಳ ಕಾದು ಅವಿನಾಶ್ ಮಚ್ಚು ಹಿಡಿದು ಆಕೆಯ ಪಕ್ಕ ನಿಂತಿದ್ದನ್ನು ಸ್ಥಳೀಯರು ನೋಡಿದ್ದರು. ಬಳಿಕ ಪುತ್ರ ಐವಿನ್ ಎದುರೇ ಆರೋಪಿ ಕೊಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ನೋಡಿ ಮಗ ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು.
ಸ್ಥಳೀಯರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಅದಾಗಲೇ ದೀಪಿಕಾ ಸಾವನ್ನಪ್ಪಿದ್ದಳು. ಕೈ, ಕಾಲು, ಕುತ್ತಿಗೆಗೆ ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಪತಿ ಅವಿನಾಶ್ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.