ಬೆಂಗಳೂರು, ಜೂ 28 (DaijiworldNews/MS): ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡವಾಗಿದ್ದು, ಸಿದ್ದು Vs ಡಿಕೆಶಿ ಕಲಹ ಈಗ ಬೇರೆಯೇ ಹಂತ ತಲುಪುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿಯೂ " ಜಗತ್ತಿನ ಕಣ್ಣಿಗೆ ಮಣ್ಣೆರೆಚಲು ಡಿಕೆಶಿ & ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಬರುವುದೇನು, ಜೊತೆಯಾಗಿ ಎತ್ತಿನ ಗಾಡಿ ಓಡಿಸುವುದೇನು, ಚಿಂತನ ಶಿಬಿರದಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ದೇನು..! ಆದರೆ ಮುಖವಾಡ ಕಳಚುತ್ತಿದೆ, ಸೃಷ್ಟಿಯಾದ ಕಂದಕ ಲೋಕಕ್ಕೆ ಸಾರಿ ಸಾರಿ ಹೇಳುತ್ತಿದೆ, ಇದು ಸಿದ್ದು Vs ಡಿಕೆಶಿ ಕದನವೆಂದು. ಹೀಗಾಗಿ ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡ" ಎಂದು ಲೇವಡಿ ಮಾಡಿದೆ.
ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಏಕಾಂಗಿತನ ಕಾಡುತ್ತಿದೆ. ಕಾಂಗ್ರೆಸ್ಸಿನಲ್ಲಿ ಈಗ ಎಲ್ಲರೂ ಸಿಎಂ ಅಭ್ಯರ್ಥಿಗಳೇ. ಡಿಕೆಶಿ ಅವರಿಂದ ಸಿಎಂ ಸ್ಥಾನಕ್ಕೆ ಪ್ರಬಲ ಲಾಬಿ ಎದುರಾಗುತ್ತಿದೆ. ಸಿದ್ದು Vs ಡಿಕೆಶಿ ಕಲಹ ಈಗ ಬೇರೆಯೇ ಹಂತ ತಲುಪುತ್ತಿದೆ, ಸಿದ್ದರಾಮಯ್ಯ ವಿರೋಧಿ ಪಾಳಯ ಜಾಗೃತಗೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಡಿಕೆಶಿ ವರ್ಚಸ್ಸಿನ ಪ್ರಭಾವಲಯವನ್ನು ತಗ್ಗಿಸಲು ಸಿದ್ದರಾಮಯ್ಯ ಹೆಣಗಾಡುತ್ತಿದ್ದಾರೆ. ಇದಕ್ಕಾಗಿ ಸಿದ್ದು ಶಕ್ತಿ ಪ್ರದರ್ಶನ ಸಮಾರಂಭದ ಸಿದ್ಧತೆ ಆರಂಭವಾಗಿದೆ. ಅಭಿಮಾನಿ ಬಳಗದ ಈ ಸಮಾರಂಭ ಯಾರಿಗೆ ಠಕ್ಕರ್ ನೀಡಲು ಆಯೋಜಿಸಲಾಗಿದೆ ಎಂಡು ಬಿಜೆಪಿ ಪ್ರಶ್ನಿಸಿದೆ.
ಕೈ ನಾಯಕರು ಪದೇ ಪದೇ ದೆಹಲಿಯ 10 ಜನ್ಪಥ್ ದರ್ಶನ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹತ್ತಿಕೊಂಡ ಕಿಡಿಯನ್ನು ನಕಲಿ ಗಾಂಧಿ ಕುಟುಂಬಕ್ಕೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಕಗ್ಗಂಟನ್ನು ಬಗೆ ಹರಿಸಲಾಗದವರು ರಾಜ್ಯದ ಸಿಎಂ ಕುರ್ಚಿಯ ಕಾದಾಟವನ್ನು ಬಗೆಹರಿಸುವರೇ ಎಂದು ಅಪಹಾಸ್ಯ ಮಾಡಿದೆ.