ನವದೆಹಲಿ, ಜೂ 26 (DaijiworldNews/DB): ಬಿಜೆಪಿ ಮಾಡುತ್ತಿರುವ ಕೊಳಕು ರಾಜಕಾರಣವನ್ನು ಸೋಲಿಸಿ ಜನ ಆಮ್ ಆದ್ಮಿ ಪಕ್ಷದ ಉತ್ತಮ ರಾಜಕಾರಣವನ್ನು ಬೆಂಬಲಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ.
ರಾಜಿಂದರ್ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಎಎಪಿ ಅಭ್ಯರ್ಥಿ ಗೆಲುವಿನ ಬಳಿಕ ಭಾನುವಾರ ಮಾತನಾಡಿದ ಅವರು, ರಾಜಿಂದರ್ ನಗರದ ಜನರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ನಮ್ಮ ಪಕ್ಷದ ಉತ್ತಮ ಮತ್ತು ಜನಪರ ಕೆಲಸಗಳಿಗೆ ಮನ್ನಣೆ ನೀಡಿ ನಮ್ಮನ್ನು ಗೆಲ್ಲಿಸಿದ್ದಕ್ಕಾಗಿ ಮತ್ತು ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.
ಈ ಗೆಲುವು ನಮಗೆ ಜನರಿಗಾಗಿ ಇನ್ನಷ್ಟು ಉತ್ತಮ ಸೇವೆ ನೀಡಲು ಸ್ಪೂರ್ತಿ ನೀಡಿದೆ. ನಮ್ಮನ್ನು ನಂಬಿ ನಮ್ಮನ್ನು ಗೆಲ್ಲಿಸಿದ ಜನರಿಗೆ ಅಷ್ಟೇ ನಂಬಿಕೆಯ ಸೇವೆಯನ್ನು ನೀಡುತ್ತೇವೆ ಎಂದವರು ಇದೇ ವೇಳೆ ಭರವಸೆ ನೀಡಿದರು.
ರಾಜಿಂದರ್ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ದುರ್ಗೇಶ್ ಪಾಠಕ್ ಅವರು ಬಿಜೆಪಿಯ ಅಭ್ಯರ್ಥಿ ರಾಜೇಶ್ ಭಾಟಿಯಾ ವಿರುದ್ಧ 11,000ಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ಸಾಧಿಸಿದ್ದರು.