ಮುಂಬೈ, ಜೂ 25 (DaijiworldNews/DB): ಮಹಾರಾಷ್ಟ್ರದಲ್ಲಿ ಬಂಡಾಯವೆದ್ದ ಶಾಸಕರಿಗೆ ನೀಡಲಾದ ಭದ್ರತೆಯನ್ನು ಸರ್ಕಾರ ಹಿಂಪಡೆದಿರುವುದನ್ನು ಖಂಡಿಸಿರುವ ಅಮರಾವತಿ ಸಂಸದೆ ನವನೀತ್ ರಾಣಾ ಉದ್ದವ್ ಠಾಕ್ರೆಯವರ ಗೂಂಡಾಗಿರಿ ಕೊನೆಯಾಗಿ ರಾಜ್ಯದಲ್ಲಿ ರಾಷ್ಟಪತಿ ಆಡಳಿತ ಜಾರಿಗೊಳ್ಳಬೇಕು ಎಂದಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದ್ದು, ಉದ್ದವ್ ಠಾಕ್ರೆ ಸರ್ಕಾರ ತೊರೆಯಬೇಕು. ಬಾಳಾ ಸಾಹೇಬರ ಚಿಂತನೆಗಳನ್ನು ಪಾಲಿಸಿ ಸ್ವಂತ ನಿರ್ಧಾರ ಕೈಗೊಂಡ ಎಲ್ಲಾ ಶಾಸಕರ ಕುಟುಂಬಗಳಿಗೆ ಭದ್ರತೆ ಒದಗಿಸಲು ಕೇಂದ್ರ ಗೃಹ ಸಚಿವರಲ್ಲಿ ವಿನಂತಿಸಲಾಗುವುದು ಎಂದು ಹೇಳಿರುವುದಾಗಿ ತಿಳಿಸಿದೆ.
ಶಿವಸೇನಾದ ಕನಿಷ್ಠ 38 ಮಂದಿ ಶಾಸಕರು ಹಾಗೂ 10 ಮಂದಿ ಪಕ್ಷೇತರರು ಏಕನಾಥ ಶಿಂಧೆ ನೇತೃತ್ವದಲ್ಲಿ ಮಹಾ ಸರ್ಕಾರದ ವಿರುದ್ದ ಬಂಡಾಯವೆದ್ದು ಅಸ್ಸಾಂನ ಗುವಾಹಟಿಯ ಹೊಟೇಲ್ವೊಂದರಲ್ಲಿ ತಂಗಿದ್ದಾರೆ. ಇದರಿಂದ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಕೂಟದ ಮಹಾ ವಿಕಾಸ ಆಘಾಡಿ ಸರ್ಕಾರ ಸಂಕಷ್ಟದಲ್ಲಿದೆ. ಈ ನಡುವೆ ಉದ್ದವ್ ಠಾಕ್ರೆ ಅವರು ಬಂಡಾಯ ಶಾಸಕರಿಗೆ ನೀಡಲಾಗಿದ್ದ ಎಲ್ಲಾ ಭದ್ರತೆಗಳನ್ನು ಹಿಂಪಡೆದುಕೊಂಡಿದ್ದಾರೆ.