ಮುಂಬೈ, ಜೂ 24 (DaijiworldNews/DB): ಶಿವಸೇನಾದ ನಿಜವಾದ ನಾಯಕರು ನಾವೇ. ನನ್ನನ್ನು ಹಾಗೂ ಬೆಂಬಲಿಗರನ್ನು ಪಕ್ಷದಿಂದ ಅನರ್ಹಗೊಳಿಸುವ ಯಾವುದೇ ಬೆದರಿಕೆಗಳಿಗೆ ಹೆದರುವ ಅಗತ್ಯವೇ ಬರುವುದಿಲ್ಲ ಎಂದು ಶಿವಸೇನಾದ ಬಂಡಾಯ ಗುಂಪಿನ ನಾಯಕ ಏಕನಾಥ ಶಿಂಧೆ ಹೇಳಿದ್ದಾರೆ.
ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ 12 ಮಂದಿ ಶಾಸಕರನ್ನು ಅನರ್ಹಗೊಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರವು ಪ್ರಯತ್ನಿಸುತ್ತಿರುವುದರ ವಿರುದ್ದ ಅವರು ಗುರುವಾರ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಸಂವಿಧಾನದ 10ನೇ ವಿಧಿ ಪ್ರಕಾರ ವಿಪ್ನ್ನು ಸದನದ ಕಲಾಪಗಳಿಗೆ ಮಾತ್ರ ನೀಡಲಾಗುತ್ತದೆ. ಆದರೆ ಪಕ್ಷದ ಸಭೆಗಳಿಗೆ ಹಾಜರಾಗಲು ವಿಪ್ ನೀಡುವುದಿಲ್ಲ. ಸುಪ್ರೀಂಕೋರ್ಟ್ ತೀರ್ಪು ಕೂಡಾ ಇದೆ. ಹೀಗಾಗಿ ಯಾವುದೇ ಬೆದರಿಕೆಗಳಿಗೆ ಅಂಜಿ ಕುಳಿತುಕೊಳ್ಳುವುದಿಲ್ಲ ಎಂದಿದ್ದಾರೆ.
ನಾವು ಬಾಳಾ ಸಾಹೇಬ್ ಠಾಕ್ರೆ ಅವರಿಗೆ ನಿಷ್ಠರಾಗಿದ್ದೇವೆ. ನಿಜವಾದ ಶಿವಸೈನಿಕರು ನಾವೇ. ಹೀಗಾಗಿ ನಮ್ಮ ಯಾವುದೇ ಶಾಸಕರ ವಿರುದ್ದ ಕ್ರಮ ಕೈಗೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದವರು ಟ್ವೀಟಿಸಿದ್ದಾರೆ.