ಮೈಸೂರು, ಜೂ 24 (DaijiworldNews/MS): ಬಿಜೆಪಿಗೆ ಸಾಮಾಜಿಕ ನ್ಯಾಯ ನೀಡಬೇಕು ಎಂಬುದಿದ್ದರೆ ಆರ್ಎಸ್ಎಸ್ನ ಮುಖ್ಯ ಸರ ಸಂಘ ಚಾಲಕರಾಗಿ ಮೋಹನ್ ಭಾಗವತ್ ಅವರ ಸ್ಥಾನಕ್ಕೆ ದ್ರೌಪದಿ ಮುರ್ಮು ಅವರಂತಹ ಮಹಿಳೆಯನ್ನು ನೇಮಿಸಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಮೈತ್ರಿಕೂಟವು ಬುಡಕಟ್ಟು ಮಹಿಳೆಯನ್ನು ಆಯ್ಕೆ ಮಾಡಿರುವುದು ಸಾಮಾಜಿಕ ನ್ಯಾಯವೂ ಅಲ್ಲ, ಇದರಲ್ಲಿ ಯಾವ ವಿಶೇಷವೂ ಅಲ್ಲ. ಒಂದು ವೇಳೆ ಸಾಮಾಜಿಕ ನ್ಯಾಯ ನೀಡಬೇಕು ಎಂಬುದಿದ್ದರೆ ಆರ್ಎಸ್ಎಸ್ನ ಮುಖ್ಯ ಸರ ಸಂಘ ಚಾಲಕರಾಗಿ ಅವರಂತಹ ಮಹಿಳೆಯನ್ನು ನೇಮಿಸಲಿ ಎಂದು ಹೇಳಿದರು.
ಮುರ್ಮು ಅವರು ಬಿಜೆಪಿಯವರೇ ಆಗಿದ್ದಾರೆ. ರಾಜ್ಯಪಾಲೆ ಸೇರಿ ಹಲವು ಹುದ್ದೆ ಅಲಂಕರಿಸಿದ್ದಾರೆ. ರಾಷ್ಟ್ರಪತಿಯಾಗಿ ಪ್ರಮುಖ ಕೆಲಸ ಮಾಡಲು ಬಿಜೆಪಿಗರು ಬಿಡುವುದಿಲ್ಲ.ಹಿಂದೆ ರಾಜೇಂದ್ರ ಪ್ರಸಾದ್ ಅವರು ಮಾಡಿದಂತೆ ಕೆಲಸ ಮಾಡಲು ಆಗುತ್ತದೆಯೇ? ರಾಮನಾಥ್ ಕೋವಿಂದ್ ಕೂಡ ರಾಷ್ಟ್ರಪತಿ ಆಗಿದ್ದರು. ಅವರು ಏನು ಮಾಡಿದರು ? ಇದು ಅವರಂತೆ ನಾಮಕವಾಸ್ಥೆಗೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ಬಿಜೆಪಿಯೂ ಭ್ರಷ್ಟಾಚಾರದ ಹಣದ ಮೂಲಕ ಆಪರೇಷನ್ ಕಮಲಕ್ಕೆ ಮುಂದಾಗಿದ್ದು. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದನ್ನು ತಡೆಗಟ್ಟಲು ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿ ಆಗಬೇಕು. ಒಂದು ಪಕ್ಷದಿಂದ ಆಯ್ಕೆಯಾದವನು ಬೇರೆ ಸ್ಥಾನಕ್ಕೆ ಹೋಗದಂತೆ ತಡೆಯಬೇಕು. ಹೋದರೆ 10 ವರ್ಷ ಆತ ಚುನಾವಣೆಗೆ ನಿಲ್ಲದಂತೆ ಆದೇಶ ಮಾಡಬೇಕು ಎಂದು ಟೀಕಿಸಿದರು.