ತಿರುವನಂತಪುರ, ಜೂ 23 (DaijiworldNews/DB): ಪತ್ನಿ ಮತ್ತು ಆಕೆಯ ಸ್ನೇಹಿತೆಯರ ಹಿಂಸೆಯಿಂದ ಬೇಸತ್ತು ವ್ಯಕ್ತಿಯೋರ್ವ ತನ್ನ ಮಗನೊಂದಿಗೆ ಕಾರನ್ನು ಟ್ರಕ್ಗೆ ಗುದ್ದಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಪ್ರಕಾಶ್ (48), ಶಿವದೇವ್ (11) ಮೃತಪಟ್ಟವರು. ಪ್ರಕಾಶ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾವಿಗೆ ಕಾರಣವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಕಾರಿನಲ್ಲಿ ಡೆತ್ನೋಟ್ ಕೂಡಾ ಪತ್ತೆಯಾಗಿದೆ. ಅದರಲ್ಲಿ ತನ್ನ ಪತ್ನಿ ಮತ್ತು ಆಕೆಯ ನಾಲ್ವರು ಸ್ನೇಹಿತರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ನನಗೆ ಹಿಂಸೆ ನೀಡುತ್ತಿರುವುದೇ ಸಾವಿಗೆ ಕಾರಣ ಎಂದು ಬರೆದಿದ್ದಾರೆ. ಅಲ್ಲದೆ, ಫೇಸ್ಬುಕ್ನಲ್ಲಿ ಪತ್ನಿ ಮತ್ತು ಆಕೆಯ ಸ್ನೇಹಿತರ ಫೋಟೋವನ್ನೂ ಶೇರ್ ಮಾಡಿದ್ದು, ಈ ವ್ಯಕ್ತಿಗಳೇ ನನ್ನ ಸಾವಿಗೆ ಕಾರಣವಾಗಿದ್ದು, ಅವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.
ಪ್ರಕಾಶ್ ಅವರ ಪತ್ನಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ಮರಳಲು ಒಪ್ಪುತ್ತಿರಲಿಲ್ಲ. ಅಲ್ಲದೆ, ಐಷಾರಾಮಿ ಜೀವನಕ್ಕಾಗಿ ಪತಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು. ದಂಪತಿ ನಡುವೆ ಸಂಬಂಧ ಉತ್ತಮವಾಗಿ ಇರಲಿಲ್ಲ ಎಂದು ತಿಳಿದು ಬಂದಿದೆ. ಪತ್ನಿಯ ಸ್ನೇಹಿತರು ಯಾರೆಂಬ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ. ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821