ರಾಮನಗರ, ಜೂ 22 (DaijiworldNews/SM): ಕೇಂದ್ರದ ಬಿಜೆಪಿ ಸರ್ಕಾರ ದೇಶ ಕಾಯುತ್ತಿರುವ ಸೈನಿಕರನ್ನು ಅಗ್ನಿಪಥ್ ಯೋಜನೆಯ ಮೂಲಕ ಅರೆಕಾಲಿಕ ಉದ್ಯೋಗಿಗಳನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಆರೋಪಿಸಿದರು.
ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಬಿಡದಿಯ ಮ್ಯಾಗ್ನೋಲಿಯ ರೆಸಾರ್ಟ್ನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ನವ ಸಂಕಲ್ಪ ಚಿಂತನಾ ಶಿಬಿರವನ್ನು ಉದ್ಘಾಟನೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ , ಮೋದಿಯವರ ರಾಜ್ಯ ಭೇಟಿ ಹಾಗೂ ರಾಹುಲ್ ಇಡಿ ವಿಚಾರಣೆಯನ್ನು ಖಂಡಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ಮುಂದಾಗಿರುವ ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ಪಕ್ಷದ ವಿರೋಧ ಇದೆ. ಸೇನಾಪಡೆಗಳ ರಕ್ಷಣೆ ಇಲ್ಲದೇ ಯಾರೂ ಕೂಡ ನಮ್ಮ ದೇಶದಲ್ಲಿ ನೆಮ್ಮದಿಯಾಗಿ ಇರೋಕೆ ಆಗೊಲ್ಲ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ನೆಲಸಬೇಕು ಎಂದರೆ ನಮ್ಮ ಸೇನಾಪಡೆಗಳು ಶಕ್ತಿಯುತವಾಗಿ ಪ್ರಬಲವಾಗಿರಬೇಕು. ಆದರೆ ಅಗ್ನಿಪಥ್ ಯೋಜನೆಯಿಂದ ಸೈನಿಕರನ್ನು ಅರೆಕಾಲಿಕ ಉದ್ಯೋಗಿಗಳನ್ನಾಗಿ ಮಾಡಲು ಬಿಜೆಪಿ ಹೊರಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಆರೋಪಿಸಿದರು.