ಪಶ್ಚಿಮ ಬಂಗಾಳ, ಜೂ 20 (DaijiworldNews/HR): ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿಪಕ್ಷಗಳು ಮಾಡಿರುವ ಮನವಿಯನ್ನು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಇಂದು ತಿರಸ್ಕರಿಸಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಈ ಹಿಂದೆ ವಿಪಕ್ಷಗಳು ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ ಅವರು ಈ ಅವಕಾಶದಿಂದ ಹಿಂದೆ ಸರಿದಿದ್ದರಿಂದ ಫಾರೂಕ್ ಅಬ್ದುಲ್ಲ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು ಅವರು ಕೂಡ ಹಿಂದೆ ಸರಿದಿದ್ದು, ಇದೀಗ ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಕೂಡ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಗೋಪಾಲಕೃಷ್ಣ ಗಾಂಧಿ, ವಿರೋಧ ಪಕ್ಷದ ಅಭ್ಯರ್ಥಿಯು ರಾಷ್ಟ್ರೀಯ ಒಮ್ಮತವನ್ನು ಮತ್ತು ರಾಷ್ಟ್ರೀಯ ವಾತಾವರಣವನ್ನು ಪ್ರತಿಪಕ್ಷಗಳ ಒಗ್ಗಟ್ಟಿನ ಜೊತೆಗೆ ಸೃಷ್ಟಿಸುವವರಾಗಿರಬೇಕು. ನನಗಿಂತ ಉತ್ತಮವಾಗಿ ಇದನ್ನು ಮಾಡುವವರು ಇತರರು ಇರುತ್ತಾರೆ ಹಾಗಾಗಿ ನಾನು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ತಮ್ಮ ಜಂಟಿ ಅಭ್ಯರ್ಥಿಯನ್ನು ಚರ್ಚಿಸಲು ಮುಂಬೈನಲ್ಲಿ ವಿರೋಧ ಪಕ್ಷಗಳ ನಿಗದಿತ ಸಭೆಗೆ ಮುಂಚಿತವಾಗಿ ಗಾಂಧಿಯವರ ಹೇಳಿಕೆ ಬಂದಿದೆ. ಅವರ ಹೆಸರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚಿಸಿದ್ದರು.