ಬೆಂಗಳೂರು, ಜೂ 18 (DaijiworldNews/DB): ಬೆಂಗಳೂರಿನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಚಲಿಸುತ್ತಿದ್ದ ಕಾರು ಕೆರೆಯಲ್ಲಿ ಮುಳುಗಿ ಕಾರಿನಲ್ಲಿದ್ದ ಯುವಕ ಮೃತಪಟ್ಟರೆ, ಇನ್ನೊಂದೆಡೆ ಮನೆಯ ಗೋಡೆ ಕುಸಿದು ವೃದ್ದೆಯೊಬ್ಬರು ಸಾವನ್ನಪ್ಪಿದ್ದಾರೆ. ರಾಜಕಾಲುವೆ ನೀರಿನಲ್ಲಿ ಮುಳುಗಿದ ಬೈಕ್ ಎತ್ತಿಕೊಳ್ಳಲು ಹೋದ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಗಾಯತ್ರಿ ಬಡವಾಣೆಯ ಯುವಕ ಮಿಥುನ್ 24 ರಾಜಕಾಲುವೆ ನೀರಿನಲ್ಲಿ ಕೊಚ್ಚಿ ಹೋದವರು. ಮಿಥುನ್ ನಿವಾಸದ ಕಟ್ಟಡದ ಬಳಿ ಕಂಪೌಂಡ್ ಜರಿದು ಬಿದ್ದ ಪರಿಣಾಮ ಬೈಕ್ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದೆ. ಈ ವೇಳೆ ಬೈಕ್ನ್ನು ಎಳೆದುಕೊಳ್ಳಲು ಹೋದ ಮಿಥುನ್ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಅಗ್ನಿಶಾಮಕ ಮತ್ತು ಎನ್ಡಿಆರ್ಎಫ್ ಸಿಬಂದಿ ಈತನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
ಮಾಗಡಿ ರಸ್ತೆ ತಾವರೆಕೆರೆಯ ಸೀಗೆಹಳ್ಳಿ ಗೇಟ್ ಬಳಿ ಚಲಿಸುತ್ತಿದ್ದ ಕಾರು ಕೆರೆಗೆ ಇಳಿದು ಯುವಕ ದೀಪಕ್ ಎಂಬಾತ ಮೃತಪಟ್ಟ ಘಟನೆ ನಡೆದಿದೆ. ಇನ್ನೊಂದೆಡೆ ದೇವಸಂದ್ರ ವಾರ್ಡ್ನಲ್ಲಿ ವಾಸವಿದ್ದ ಕಾವೇರಿನಗರದ ಮುನಿಯಮ್ಮ(60) ಅವರು ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ ಸುಮಾರು ಎರಡು ಗಂಟೆ ವೇಳೆಗೆ ಗೋಡೆ ಕುಸಿದಿದ್ದು, ಅಲ್ಲೇ ಮಲಗಿದ್ದ ಮುನಿಯಮ್ಮ ಅವರ ಮೇಲೆ ಬಿದ್ದಿದೆ. ಘಟನೆಯಲ್ಲಿಇಬ್ಬರು ಗಾಯಗೊಂಡಿದ್ದಾರೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.