ನವದೆಹಲಿ, ಜೂ 15 (DaijiworldNews/DB): ಬಿಜೆಪಿ ಪೊಲೀಸ್ ಗೂಂಡಾಗಳನ್ನು ಕಳುಹಿಸಿ ಕಾಂಗ್ರೆಸ್ ಕಚೇರಿಯನ್ನು ಅಳಿಸಿ ಹಾಕಲು ಯತ್ನಿಸುವ ಮೂಲಕ ಪ್ರಜಾಪ್ರಭುತ್ವವನ್ನೇ ಕೊಲೆ ಮಾಡುತ್ತಿದೆ. ಈ ಅಹಂಕಾರವನ್ನು ನಾವು ಮುರಿಯುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ವೀಡಿಯೋವೊಂದನ್ನು ಹಂಚಿಕೊಂಡು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಪೂರ್ವಜರು ಹೋರಾಡಿ ಪ್ರಾಣಾರ್ಪಣೆ ಮಾಡಿ ನಮಗೆ ನೀಡಿದ ಪ್ರಜಾಪ್ರಭುತ್ವವನ್ನು ಬಿಜೆಪಿ ಕೊಲ್ಲುತ್ತಿದೆ. ಎಐಸಿಸಿ ಪ್ರಧಾನ ಕಚೇರಿಯ ಬಾಗಿಲನ್ನು ಪೊಲೀಸರ ಮೂಲಕ ಆ ಪಕ್ಷ ಒಡೆದು ಹಾಕಿದೆ. ಇದು ದೇಶಕ್ಕೆ ಎರಗಿದ ಕರಾಳ ಘಳಿಗೆಯಾಗಿದೆ. ಕಾಂಗ್ರೆಸ್ ಕಚೇರಿ ಪ್ರವೇಶಿಸಿದ ಪೊಲೀಸ್ ಅಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ನಡುವೆ ಓರ್ವ ಪೊಲೀಸ್ ಅಧಿಕಾರಿ ಎಐಸಿಸಿ ಕಚೇರಿ ಆವರಣಕ್ಕೆ ನುಗ್ಗಿ ಕಾರ್ಯಕರ್ತರನ್ನು ಥಳಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಇದರ ವಿರುದ್ದ ಆಕ್ರೋಶ ಹೊರ ಹಾಕಿದೆ.