ಲಕ್ನೋ, ಜೂ 15 (DaijiworldNews/DB): ಲಕ್ನೋದಲ್ಲಿ ಪಬ್ಜಿ ಆಡಲು ಬಿಡದ ತಾಯಿಯನ್ನು ಪುತ್ರನೇ ಗುಂಡಿಕ್ಕಿ ಕೊಂದಿರುವ ಪ್ರಕರಣ ದಿನೇದಿನೇ ಜಟಿಲವಾಗುತ್ತಿದೆ. ಈ ಬಾಲಕ ವಿದೇಶೀ ಪಿಸ್ತೂಲ್ ಆಪರೇಟಿಂಗ್ ತರಬೇತಿ ಪಡೆದಿದ್ದ ಎಂಬ ಅಂಶ ಇದೀಗ ಹೊರ ಬಿದ್ದಿದೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕೆಲ ದಿನಗಳ ಹಿಂದೆ ಪಬ್ಜಿ ಆಡಲು ಬಿಡದ ತಾಯಿಯನ್ನು ಆಕೆಯ ಅಪ್ರಾಪ್ತ ಪುತ್ರನೇ ಗುಂಡಿಕ್ಕೆ ಕೊಂದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆತನನ್ನು ಮಕ್ಕಳ ರಕ್ಷಣಾ ಆಯೋಗದ ತಂಡಕ್ಕೆ ಹಸ್ತಾಂತರಿಸಲಾಗಿದೆ. ಈ ನಡುವೆ ಆತನ ಹತ್ತಿರದ ಸಂಬಂಧಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಬಾಲಕ ಪಿಸ್ತೂಲ್ ಆಪರೇಟ್ ಮಾಡುವ ತರಬೇತಿಯನ್ನು ಪಡೆದಿದ್ದ. ಅಲ್ಲದೆ ತನ್ನ ತಂದೆಯ ಲೈಸೆನ್ಸ್ ಹೊಂದಿರುವ ಪಿಸ್ತೂಲ್ನಲ್ಲಿ ಬಾಲಕ ಟ್ರಿಗರ್ ಒತ್ತುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಆತ ತಪ್ಪೆಸಗಿದಾಗ ಆತನ ತಂದೆ ಆತನಿಗೆ ಬೆಂಬಲ ನೀಡಿ ಮಾತನಾಡುತ್ತಿದ್ದರೆ, ತಾಯಿ ಗದರುತ್ತಿದ್ದಳು. ಹೀಗಾಗಿ ತಾಯಿಯ ಮೇಲೆ ಆತ ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಬಾಲಕ ತಾಯಿಯನ್ನು ಗುಂಡಿಕ್ಕಿ ಕೊಂದ ಬಳಿಕ ಶವವನ್ನು ಮೂರು ದಿನ ಮನೆಯಲ್ಲೇ ಇರಿಸಿಕೊಂಡಿದ್ದ. ಅಲ್ಲದೆ, ಆತನ ಕಿರಿಯ ಸಹೋದರಿಯನ್ನೂ ಮನೆಯಲ್ಲೇ ಕೂಡಿ ಹಾಕಿದ್ದ. ಅಲ್ಲದೆ, ತಾಯಿಯನ್ನು ಕೊಂದ ಕೂಡಲೇ ಮಧ್ಯರಾತ್ರಿ 2 ಗಂಟೆಗೆ ಯಾರನ್ನೋ ಭೇಟಿಯಾಗಲು ದ್ವಿಚಕ್ರ ವಾಹನದಲ್ಲಿ ಆತ ಹೊರ ಹೋಗಿದ್ದ ಎಂದು ಆತನ ಸಹೋದರಿ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾಳೆ.
ತಾಯಿಯ ಶವವನ್ನು ಬೇರೆಡೆ ಸಾಗಿಸಲು ಆತನ ಸ್ನೇಹಿತನಿಗೆ 5 ಸಾವಿರ ರೂ. ನೀಡುವುದಾಗಿ ಹೇಳಿದ್ದ. ಆದರೆ ಸ್ನೇಹಿತ ಇದನ್ನು ತಿರಸ್ಕರಿಸಿ ಹೋಗಿದ್ದ. ಅಲ್ಲದೆ, ತಾಯಿ ವಿರೋಧಿಸುತ್ತಿದ್ದ ಕ್ರಿಕೆಟ್ ಆಟವನ್ನು ಕೂಡಾ ಕೊಲೆಯ ಬಳಿಕ ಬಾಲಕ ಆಡಿದ್ದಾನೆ. ಜೂನ್ 7ರಂದು ಆತ ತನ್ನ ತಂದೆಗೆ ವೀಡಿಯೋ ಕಾಲ್ ಮಾಡಿ ತಾಯಿಯ ಶವ ಮತ್ತು ಕೊಲೆ ಮಾಡಲು ಬಳಸಿದ್ದ ಪಿಸ್ತೂಲನ್ನು ತೋರಿಸಿದ್ದಾನೆ ಎಂಬ ಆಘಾತಕಾರಿ ಮಾಹಿತಿಯೂ ತಿಳಿದು ಬಂದಿದೆ.