ಬೆಳಗಾವಿ, ಜೂ 15 (DaijiworldNews/DB): ವಾಯುವ್ಯ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಸತತ ಎಂಟನೇ ಬಾರಿಗೆ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಜೆಡಿಎಸ್ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದ 76 ವರ್ಷದ ಹೊರಟ್ಟಿ ಅವರು ಜೆಡಿಎಸ್ನ ಶ್ರೀಶೈಲ ಗಡದಿನ್ನಿ, ಕಾಂಗ್ರೆಸ್ನ ಬಸವರಾಜ ಗುರಿಕಾರ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದರು. ಬಸವರಾಜ ಹೊರಟ್ಟಿ ಅವರು 7076 ಮತ ಪಡೆದರೆ, ಕಾಂಗ್ರೆಸ್ನ ಬಸವರಾಜ ಗುರಿಕಾರ 3314 ಮತಗಳೊಂದಿಗೆ ಪರಾಭವಗೊಂಡರು.
ಹೊರಟ್ಟಿ ಅವರು ಗೆಲುವು ಸಾಧಿಸುತ್ತಿದ್ದಂತೆ ಇತ್ತ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಂಭ್ರಮಿಸಿದರು. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹೊರಟ್ಟಿ ಬೆಂಬಲಿಗರು ಅವರ ಫೋಟೋ ಹಿಡಿದುಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ಗೆಲ್ಲುವ ವಿಶ್ವಾಸ ಮೊದಲೇ ಇತ್ತು. ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಒತ್ತು ಕೊಡುತ್ತೇನೆ. ಶಿಕ್ಷಕರ ಬೇಡಿಕೆ ಈಡೇರಿಕೆಗೆ ಬದ್ದನಾಗಿ ಕೆಲಸ ಮಾಡುತ್ತೇನೆ. ಮುಂದೆ ಹೋರಾಟಗಳು ನಿರಂತರವಾಗಲಿವೆ ಎಂದರು.
ಮುಂದೆ ಸಭಾಪತಿ ಅಥವಾ ಸಚಿವ ಸ್ಥಾನ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಪಕ್ಷಕ್ಕೆ ಬಿಟ್ಟ ವಿಷಯ ಎಂದರು.