ಬೆಂಗಳೂರು, ಜೂ 15 (DaijiworldNews/DB): ರಾಜ್ಯದಲ್ಲಿ ಬುಲ್ಡೋಜರ್ ಸಂಸ್ಕೃತಿಗೆ ಅವಕಾಶ ನೀಡುವುದಿಲ್ಲ. ಸರ್ಕಾರ ಇಂತಹ ಕ್ರಮಕ್ಕೆ ಮುಂದಾದಲ್ಲಿ ನಾವೇ ಹೋಗಿ ಬುಲ್ಡೋಜರ್ ಮುಂದೆ ಮಲಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಈಗಾಗಲೇ ಬುಲ್ಡೋಜರ್ ಮೂಲಕ ಮನೆಗಳ ನೆಲಸಮ ಮಾಡಲಾಗುತ್ತಿದೆ ಎಂಬ ಸುದ್ದಿಗಳ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಸರ್ಕಾರದಂತೆ ರಾಜ್ಯದಲ್ಲಿ ಬುಲ್ಡೋಜರ್ ತಂತ್ರಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಜನರನ್ನು ಆತಂಕಕ್ಕೆ ದೂಡುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದು ದಬ್ಬಾಳಿಕೆಯಾಗಿದ್ದು, ದಬ್ಬಾಳಿಕೆ ನಡೆಸಿ ಅಲ್ಪಸಂಖ್ಯಾತರನ್ನು ಹೆದರಿಸುವುದು ಅವರ ಉದ್ದೇಶ. ಆದರೆ ಅದು ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ. ಒಂದು ವೇಳೆ ಅಂತಹ ಕ್ರಮ ಇಲ್ಲಿ ಮಾಡಿದರೆ ನಾವೇ ಬುಲ್ಡೋಜರ್ ಮುಂದೆ ಮಲಗಿ ಪ್ರತಿಭಟನೆ ಮಾಡುತ್ತೇವೆ ಎಂದವರು ತಿಳಿಸಿದರು.