ಬೆಂಗಳೂರು, ಜೂ 15 (DaijiworldNews/DB): ಯಾವುದೇ ತಪ್ಪು ಮಾಡದಿದ್ದರೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿ ನಮ್ಮ ಮೇಲೆ ಕೇಸ್ ಹಾಕುತ್ತಿದೆ. ಅದಕ್ಕೆಲ್ಲ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಎಷ್ಟೇ ಕೇಸ್ ದಾಖಲಿಸಲಿ. ಆದರೆ ನಾವು ಅದಕ್ಕೆಲ್ಲ ಹೆದರಿ ಕುಳಿತುಕೊಳ್ಳುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಯಾವುದೇ ತಪ್ಪು ಮಾಡಿಲ್ಲ. ಕೇಂದ್ರ ಸರ್ಕಾರದ ತಪ್ಪುಗಳು ದೊಡ್ಡದಿವೆ ಎಂದರು.
ಮುಖ್ಯಮಂತ್ರಿ, ಸಚಿವರುಗಳು ರ್ಯಾಲಿ ನಡೆಸಿದಾಗ ಯಾವುದೇ ಕೇಸ್ ಅವರ ಮೇಲೆ ದಾಖಲಾಗಿಲ್ಲ. ನಾವು ಲಂಚಕ್ಕಾಗಲೀ, ಮಂಚಕ್ಕಾಗಲೀ ಹೋಗಿಲ್ಲ. 40 ಪರ್ಸೆಂಟ್ ಕಮಿಷನ್ ಪಡೆದು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿಲ್ಲ. ಅವರು ಕಾಂಗ್ರೆಸ್ ನಾಯಕರನ್ನು ಮುಗಿಸಬೇಕೆಂದು ಪಣ ತೊಟ್ಟಿದ್ದಾರೆ. ಆದರೆ ನಾವು ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ದರಿದ್ದೇವೆ ಎಂದು ತಿಳಿಸಿದರು.