ವಿಜಯಪುರ, ಜೂ 15 (DaijiworldNews/DB): ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಪತ್ನಿ ನಿದ್ದೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಏಕ್ತಾ ನಗರ ನಿವಾಸಿ, ವಿಜಯಪುರದಲ್ಲಿ ಪಾನ್ ಶಾಪ್ ಹೊಂದಿರುವ ಪ್ರಕಾಶ್ ಹಳ್ಳಿ (40) ಕೊಲೆಯಾದ ದುರ್ದೈವಿ. ಕೊಲೆ ಪ್ರಕರಣದಲ್ಲಿ ಅಂಗನವಾಡಿ ಶಿಕ್ಷಕಿಯಾಗಿರುವ ಪತ್ನಿ ರಾಜೇಶ್ವರಿ ಹೊಸಮನಿ (35) ಹಾಗೂ ಆಕೆಯ ಪ್ರಿಯಕರ ರವಿ ತಳವಾರ (25) ಹಾಗೂ ಕೊಲೆಗೆ ಸಹಾಯ ಮಾಡಿದ ಆತನ ಸ್ನೇಹಿತ ಗುರುಪಾದ ದಳವಾಯಿ ಇದೀಗ ಜೈಲು ಪಾಲಾಗಿದ್ದಾರೆ.
ಮೂರು ಮಕ್ಕಳ ತಾಯಿಯಾಗಿರುವ ರಾಜೇಶ್ವರಿ ಕಳೆದ ಐದಾರು ವರ್ಷಗಳಿಂದ ರವಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಮನೆಯಲ್ಲಿದ್ದ ಹಣ, ಚಿನ್ನಾಭರಣ ಸಹಿತ ಮೂರು ಬಾರಿ ರವಿಯೊಂದಿಗೆ ಪರಾರಿಯಾಗಿ ತಿಂಗಳ ಬಳಿಕ ಮನೆಗೆ ಹಿಂತಿರುಗಿದ್ದಳು. ಈ ವಿಚಾರ ತಿಳಿದಿದ್ದರೂ, ಪತಿ ಆಕೆಯನ್ನು ಒಪ್ಪಿಕೊಂಡು ಸಂಸಾರ ಸರಿದೂಗಿಸಿಕೊಂಡು ಹೋಗಿದ್ದ. ಆದರೆ ತನ್ನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆಂದು ಆತನನ್ನು ಕೊಲೆ ಮಾಡುವ ಯೋಜನೆ ರೂಪಿಸಿದ್ದ ಪತ್ನಿ ರಾಜೇಶ್ವರಿ ಜೂನ್ 8ರಂದು ರಾತ್ರಿ ಆತನಿಗೆ ಚಿಕನ್ ಸಾರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಊಟ ನೀಡಿದ್ದಳು. ಊಟ ಮಾಡಿದಾಕ್ಷಣ ಪ್ರಜ್ಞೆ ತಪ್ಪಿ ಪತಿ ಬಿದ್ದಿರುವುದನ್ನು ನೋಡಿ ಕೂಡಲೇ ಪ್ರಿಯಕರ ರವಿ ಹಾಗೂ ಆತನ ಸ್ನೇಹಿತ ಗುರುಪಾದ ದಳವಾಯಿಯನ್ನು ಮನೆಗೆ ಕರೆಸಿದ್ದಾಳೆ. ಬಳಿಕ ಮೂವರೂ ಸೇರಿ ಸೀರೆಯಿಂದ ಕತ್ತಿಗೆ ಬಿಗಿಯಾಗಿ ಬಿಗಿದು ಕೊಲೆಗೈದಿದ್ದಾರೆ. ಕೊಲೆ ಮಾಡಿದ ಬಳಿಕ ಪ್ರಿಯಕರ ಹಾಗೂ ಆತನ ಸ್ನೇಹಿತ ಪರಾರಿಯಾಗಿದ್ದು, ರಾಜೇಶ್ವರಿ ಬೆಳಗ್ಗಿನವರೆಗೆ ಶವದೊಂದಿಗೇ ಇದ್ದಳು. ಆ ಬಳಿಕ ಪತಿಗೆ ಹೃದಯಾಘಾತವಾಗಿದೆ ಎಂದು ಎಲ್ಲರನ್ನೂ ನಂಬಿಸಿದ್ದಾಳೆ. ಆದರೆ, ದಂಪತಿಗಳ ಮಧ್ಯೆ ವಿರಸವಿದ್ದ ಬಗ್ಗೆ ಮನೆಯವರಿಗೆ ಗೊತ್ತಿದ್ದರಿಂದ ಮೃತನ ತಂದೆ ಲಕ್ಷ್ಮಣ ಜಲನಗರ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಹೊರ ಬಿದ್ದಿದೆ. ಇದೀಗ ಕೃತ್ಯ ಎಸಗಿದ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.