ಚಿಕ್ಕಮಗಳೂರು, ಜೂ 15 (DaijiworldNews/DB): ವಿಧಾನಸಭೆ ಸ್ಪೀಕರ್ ಹಾಗೂ ಮತ್ತೆ ಸಚಿವೆಯಾಗುವ ಅವಕಾಶಕ್ಕೆ ಸಿದ್ದರಾಮಯ್ಯ ಸಹಿತ ಹಲವು ನಾಯಕರು ಅಡ್ಡಿಯಾಗಿದ್ದರು. ರಾಜಕೀಯವಾಗಿ ಮೇಲೇರುವ ಎಲ್ಲ ಅವಕಾಶಗಳಿಗೆ ಸಿದ್ದರಾಮಯ್ಯ ತಣ್ಣೀರು ಎರಚಿದ್ದಾರೆ ಎಂದು ಮಾಜಿ ಸಚಿವೆ ಮೋಟಮ್ಮ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ದಲಿತ ಮಹಿಳಾ ರಾಜಕಾರಣಿಯಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿ, ಪರಿಷತ್ನ ವಿರೋಧ ಪಕ್ಷದ ನಾಯಕಿಯಾಗಿ ಹಾಗೂ ಎಂಎಡಿಬಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ರಾಜಕೀಯದಿಂದ ದೂರ ಸರಿದಿರುವ ಮೋಟಮ್ಮ ’ಬಿದಿರು, ನೀನ್ಯಾರಿಗಲ್ಲದವಳು’ ಎಂಬ ಶೀರ್ಷಿಕೆಯಲ್ಲಿ ತಮ್ಮ ಆತ್ಮಚರಿತ್ರೆ ಬರೆದಿದ್ದಾರೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಈ ಪುಸ್ತಕವನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.
ತಮ್ಮ ಆತ್ಮಚರಿತ್ರೆಯಲ್ಲಿ ರಾಜಕೀಯ ಜೀವನದ ಕುರಿತಂತೆ ಹಲವಾರು ಅಂಶಗಳನ್ನು ಮೋಟಮ್ಮ ಉಲ್ಲೇಖಿಸಿದ್ದಾರೆ. ಅದರಲ್ಲೂ ತಾವು ಗುರುತಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ನಾಯಕರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸಬ್ ರಿಜಿಸ್ಟ್ರಾರ್ ಆಗಿದ್ದ ದಲಿತ ಮಹಿಳೆಯೊಬ್ಬಳು ರಾಜಕೀಯದಲ್ಲಿ ಉತ್ತುಂಗಕ್ಕೇರುವುದು ಮತ್ತು ಕಾಂಗ್ರೆಸ್ನ ಉನ್ನತ ಸ್ಥಾನಕ್ಕೇರುವುದಕ್ಕೆ ಹಾದಿ ಬಹಳ ಕಠಿಣವಾಗಿತ್ತು. ದಿ. ಇಂದಿರಾಗಾಂಧಿ ಹೊರತುಪಡಿಸಿ ಬೇರೆ ಯಾರ ಮೇಲೂ ಪ್ರಭಾವ ಬೀರುವುದು ಮತ್ತು ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಕೆಲಸ ಮಾಡುವುದು ಸುಲಭವಾಗಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರು ತನ್ನ ಧ್ವನಿಯನ್ನು ಅಡಗಿಸಲು ಕಾರಣರಾದರು. ವಿಧಾನಸಭೆಯ ಸ್ಪೀಕರ್ ಮತ್ತು ಇನ್ನೊಮ್ಮೆ ಸಚಿವೆಯಾಗುವ ಅವಕಾಶ ನನಗಿತ್ತು. ಆದರೆ ಅದಕ್ಕೆ ಸಿದ್ದರಾಮಯ್ಯ ಸೇರಿದಂತೆ ಹಲವರು ಅಡ್ಡಗಾಲು ಹಾಕಿದ್ದರು. ರಾಜಕೀಯವಾಗಿ ನಾನು ಶಾಶ್ವತವಾಗಿ ಬೆಳೆಯಲು ಇರುವ ಎಲ್ಲಾ ಅವಕಾಶಗಳನ್ನು ಸಿದ್ದರಾಮಯ್ಯ ತಡೆದಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.
ವೇದಿಕೆ ಮೇಲೆ ಕಾಂಗ್ರೆಸ್ನ ಎಲ್ಲಾ ನಾಯಕರು ಸೌಹಾರ್ದಯುತವಾಗಿಯೇ ಇರುತ್ತಾರೆ. ಆದರೆ ಅದರಿಂದಾಚೆ ಬಂದ ಮೇಲೆ ವೈಯಕ್ತಿಕ ಲಾಭಕ್ಕೇ ಗಮನ ನೀಡುತ್ತಾರೆ. ಪಕ್ಷ ಬಲವರ್ಧನೆಯ ದೂರದೃಷ್ಟಿ ಹೊಂದಿರುವ ನಾಯಕ ಆ ಪಕ್ಷದಲ್ಲಿಲ್ಲ ಎಂದು ಮೋಟಮ್ಮ ಬರೆದುಕೊಂಡಿದ್ದಾರೆ.