ಬೆಂಗಳೂರು, ಜೂ 14 (DaijiworldNews/DB): ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಯವರನ್ನು ಸತತ ಎರಡು ದಿನಗಳಿಂದ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಬಿಜೆಪಿಗೆ ಕೇಳಿದೆ.
ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಬಿಜೆಪಿಯನ್ನು ಪ್ರಶ್ನಿಸಿ ಮಾಡಿರುವ ಟ್ವೀಟ್ಗಳನ್ನು ಕರ್ನಾಟಕ ಕಾಂಗ್ರೆಸ್ ರೀಟ್ವೀಟ್ ಮಾಡಿದೆ.
ಬಿಜೆಪಿಯ ಪ್ರಬುದ್ಧ ವಕ್ತಾರರು ದಯವಿಟ್ಟು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವರೇ: 1. ಪಿಎಂಎಲ್ಎ ಅಡಿಯಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಇಡಿ ತನಿಖೆಯನ್ನು ಪ್ರಚೋದಿಸಿದ 'ನಿಗದಿತ ಅಪರಾಧ' ಯಾವುದು? 2. ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಯಾವ ಪೊಲೀಸ್ ಸಂಸ್ಥೆ ಎಫ್ಐಆರ್ ದಾಖಲಿಸಿದೆ? 3. ಎಫ್ಐರ್ ಎಲ್ಲಿದೆ? ದಯವಿಟ್ಟು ಎಫ್ಐಆರ್ನ ಪ್ರತಿಯನ್ನು ನಮಗೆ ತೋರಿಸುತ್ತೀರಾ? 4. ನಿಗದಿತ ಅಪರಾಧಕ್ಕೆ ಗೈರು ಹಾಜರಾಗಿರುವುದು ಮತ್ತು ಎಫ್ಐಆರ್ಗೆ ಗೈರು ಹಾಜರಾಗಿರುವುದಕ್ಕೆ, ಪಿಎಂಎಲ್ಎ ಅಡಿಯಲ್ಲಿ ತನಿಖೆ ಮಾಡಲು ಇಡಿ ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ನಿಮಗೆ ತಿಳಿದಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮುಗಿದಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಬಿಜೆಪಿ ಕರ್ನಾಟಕ , ಈ ದಶಕದ ಅತಿದೊಡ್ಡ ಹಗರಣ ಪಿಎಂ ಕೇರ್ ಫಂಡ್ ಬಗ್ಗೆ ಯಾಕೆ ತುಟಿ ಬಿಚ್ಚುವುದಿಲ್ಲ? ಇಡಿ ನೋಟಿಸ್ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಯಾವಾಗ ತಲುಪಲಿದೆ? ಜನರ ಹಣದ ಸರಿಯಾದ ಲೆಕ್ಕ ಯಾವಾಗ ಬಹಿರಂಗ ಪಡಿಸುತ್ತೀರಿ? ಎಂದೂ ಪ್ರಶ್ನೆ ಮಾಡಿದೆ.
ರಫೆಲ್ ಹಗರಣ - ಮುಚ್ಚಿ ಹಾಕಲಾಗುತ್ತದೆ, ಫೈಲ್ಗಳು ಕಳೆದು ಹೋಗುತ್ತವೆ! ಪಿಎಂ ಕೇರ್ಸ್ ಹಗರಣ - ತನಿಖೆಯೇ ನಡೆಯುವುದಿಲ್ಲ, ಜನರ ಹಣ ಲೂಟಿ ಹೊಡೆಯಲಾಗುತ್ತದೆ! ಶವ ಪೆಟ್ಟಿಗೆ ಹಗರಣ - ಪ್ರಮುಖ ಆರೋಪಿಗಳನ್ನು ಬಚಾವು ಮಾಡಲಾಗುತ್ತದೆ! ಸಿಎಂ ಹುದ್ದೆಗೆ 2500 ಕೋಟಿ ರೂ.- ತನಿಖೆಯೇ ಆಗುವುದಿಲ್ಲ! ಲೂಟಿಯೇ ಬಿಜೆಪಿ ಧರ್ಮ ಎಂದು ವಾಗ್ದಾಳಿ ನಡೆಸಿದೆ.