ಕಲಬುರ್ಗಿ, ಜೂ 14 (DaijiworldNews/MS): ರಾಜ್ಯದಲ್ಲಿ ಪಠ್ಯಪುಸ್ತಕಗಳಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿಯ ಭಿತ್ತಿಪತ್ರ ಮುದ್ರಿಸಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ರೋಹಿತ್ ಚಕ್ರವರ್ತಿ ನೇತೃತ್ವದ ಅಸಾಂವಿಧಾನಿಕವಾಗಿ, ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಇತಿಹಾಸವನ್ನು ತಿರುಚಲಾಗುತ್ತಿದೆ, ಸಾಮಾಜಿಕ, ಧಾರ್ಮಿಕ ಮತ್ತು ವ್ಯಕ್ತಿ ವಿಶೇಷಗಳ ಕುರಿತು ತಪ್ಪಾದ ಮತ್ತು ಸುಳ್ಳು ಮಾಹಿತಿಗಳನ್ನು ಮಕ್ಕಳಿಗೆ ಕೊಡಲಾಗುತ್ತಿದೆ ಎಂದು ದೂರಿದರು.
ಬೌದ್ಧ, ಜೈನ ವಿಚಾರಗಳು ಬಂದಾಗ ಧರ್ಮ ಎನ್ನುವ ಪದ ಉದ್ದೇಶ ಪೂರ್ವಕವಾಗಿ ಬಳಸದೆ ಮತ ಎಂದು ಬಳಸಲಾಗಿದೆ. ಪಠ್ಯದಲ್ಲಿ ಮನುಸ್ಮೃತಿ ವಿಜೃಂಭವಿಸುವ ಮೂಲಕ ಮಹಿಳೆಯರ ಘನತೆ ಕುಂಠಿತಗೊಳಿಸುವಂತೆ ಮಾಡಲಾಗಿದೆ. ಅಲ್ಲದೆ ರಾಮನನ್ನು ವೈಭವೀಕರಿಸುವ ಮೂಲಕ ವಾಲ್ಮೀಕಿಯನ್ನು ದಾರಿಗಳ್ಳ ಎಂದು ಜರಿಯಲಾಗಿದೆ ಎಂದು ಆರೋಪಿಸಿದರು.
ಈ ಹಿನ್ನಲೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಾಳೆ ಕುವೆಂಪು ಅವರ ಹುಟ್ಟೂರಾದ ಕುಪ್ಪಳ್ಳಿಯಿಂದ ತೀರ್ಥಹಳ್ಳಿಯವರೆಗೆ ನಾಡಿನ ಮಠಾಧೀಶರು, ಲೇಖಕರು, ಬುದ್ಧಿಜೀವಿಗಳು, ಚಿಂತಕರ ನೇತೃವದಲ್ಲಿ ಪಾದಯಾತ್ರೆ ನಡೆಸಲಿದ್ದೇವೆ ಎಂದರು