ನವದೆಹಲಿ, ಜೂ 14 (DaijiworldNews/DB): ಭಾರತೀಯ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ಅಗ್ನಿಪಥ ಯೋಜನೆಗೆ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದೊಂದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದರು.
ಹಲವು ಬದಲಾವಣೆಗಳೊಂದಿಗೆ ಅಗ್ನಿಪಥ್ ನೇಮಕಾತಿ ಯೋಜನೆ ಜಾರಿಗೊಳ್ಳಲಿದೆ. ಇದರಲ್ಲಿ ಸಶಸ್ತ್ರ ಪಡೆಗಳಲ್ಲಿ ಯೋಧರ ಸರಾಸರಿ ವಯಸ್ಸು 26 ವರ್ಷ ಆಗಿರಲಿದೆ. ಸೇನೆಯಲ್ಲಿ ನಾಲ್ಕು ವರ್ಷಗಳ ಕಾಲ ಯುವಕರನ್ನು ನೇಮಿಸುವ ಅವಕಾಶ ಇದರಲ್ಲಿದೆ. ಯೋಧರು ಸೇವೆಯನ್ನು ತೊರೆಯುವ ವೇಳೆ ಸೇವಾ ನಿಧಿ ಪ್ಯಾಕೇಜ್ ಪಡೆಯಲಿದ್ದಾರೆ ಎಂದರು.
ಸೇನಾ ಸಮವಸ್ತ್ರ ಧರಿಸಬೇಕೆಂಬ ಆಸೆ ಬಹುತೇಕರಲ್ಲಿರುತ್ತದೆ. ಅಂತಹವರ ನೇಮಕಕ್ಕೆ ಇದರಲ್ಲಿ ಅವಕಾಶವಿದೆ. ನಾಲ್ಕು ವರ್ಷ ಕಾಲ ಅವರು ಸೇವೆ ಸಲ್ಲಿಸಬಹುದು. ಹೀಗೆ ಸೇರ್ಪಡೆಗೊಂಡವರು ಹೊಸ ತಾಂತ್ರಿಕತೆಯ ಕುರಿತು ಅನುಭವ, ಮಾಹಿತಿ ಪಡೆದುಕೊಳ್ಳಲಿದ್ದಾರೆ. ಆರೋಗ್ಯ, ಸದೃಢ ಮೈಕಟ್ಟು ಕಡೆಗೂ ಒತ್ತು ನೀಡಲಿದ್ದಾರೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಇದು ಅತ್ಯುತ್ತಮ ಮಾರ್ಗವಾಗಲಿದ್ದು, ಹೊಸ ತಾಂತ್ರಿಕತೆ ಮಾಹಿತಿಯಿಂದಾಗಿ ಉತ್ಪಾದನಾ ಸಾಮರ್ಥ್ಯವೂ ಅಧಿಕಗೊಳ್ಳಲಿದೆ ಎಂದು ರಾಜನಾಥ್ ಸಿಂಗ್ ವಿವರಿಸಿದರು.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಮಾತನಾಡಿ, ಅಗ್ನಿಪಥ ಯೋಜನೆಯಿಂದಾಗಿ ಸಶಸ್ತ್ರ ಪಡೆಗಳಲ್ಲಿ ನೇಮಕಗೊಳ್ಳುವ ಪ್ರತಿಭಾನ್ವಿತರ ಸಂಖ್ಯೆ ಹೆಚ್ಚಲಿದೆ. ಹೊಸ ಯೋಜನೆಯಡಿ ನೇಮಕಗೊಳ್ಳುವ ಸೈನಿಕರನ್ನು 'ಅಗ್ನಿವೀರ್' ಎಂದು ಕರೆಯಲಾಗುತ್ತದೆ ಎಂದರು.