ಕುಂಭಕೋಣಂ, ಜೂ 14 (DaijiworldNews/DB): ಕಳೆದ ಐದು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿಯನ್ನು ಯುವತಿಯ ಸಹೋದರನೇ ಮನೆಗೆ ಊಟಕ್ಕೆ ಕರೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿಗಳನ್ನು ಶರಣ್ಯ (24), ಮೋಹನ್(31) ಎಂದು ಗುರುತಿಸಲಾಗಿದೆ. ಎಸ್ಸಿ ಸಮುದಾಯಕ್ಕೆ ಸೇರಿದ ಶರಣ್ಯಾ, ಮೊದಲಿಯಾರ್ ಸಮುದಾಯಕ್ಕೆ ಸೇರಿದ ಮೋಹನ್ ಐದು ದಿನಗಳ ಹಿಂದಷ್ಟೇ ಮದುವೆಯಾಗಿದ್ದರು. ಯುವತಿಯ ಅಣ್ಣ ಶಕ್ತಿವೇಲು ದಂಪತಿಗಳಿಬ್ಬರನ್ನು ಊಟಕ್ಕೆಂದು ಮನೆಗೆ ಕರೆಸಿ ಚೂಪಾದ ಆಯುಧದಿಂದ ಹಲ್ಲೆ ಮಾಡಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ದಂಪತಿಗಳನ್ನು ಆತ ಕೊಲೆ ಮಾಡಿರುವುದು ಜಾತಿ ಕಾರಣಕ್ಕೋ ಅಥವಾ ಪ್ರೀತಿಸಿದ ಕಾರಣಕ್ಕೋ ಎಂಬುದು ತಿಳಿದು ಬಂದಿಲ್ಲ.
ಕುಂಭಕೋಣಂ ಸಮೀಪದ ತುಳಕ್ವೇಲಿ ಗ್ರಾಮದ ಶರಣ್ಯ ಚೆನ್ನೈನಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶರಣ್ಯಾ ಸೋದರ ಮಾವ ರಂಜಿತ್ನನ್ನು ವರಿಸಬೇಕೆಂದು ಆಕೆಯ ಸಹೋದರ ಶಕ್ತಿವೇಲು ಹೇಳಿದ್ದನಾದರೂ, ಆಕೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ನಡುವೆ ಕಳೆದ ಐದು ತಿಂಗಳ ಹಿಂದೆ ಆಕೆಗೆ ಪೊನ್ನೂರಿನ ಮೋಹನ್ ಎಂಬಾತ ಪರಿಚಯವಾಗಿ, ಇವರಿಬ್ಬರ ಮಧ್ಯೆ ಪ್ರೀತಿ ಬೆಳೆದಿತ್ತು. ಹೀಗಾಗಿ ಕಳೆದ ವಾರ ಇವರಿಬ್ಬರು ಚೆನ್ನೈನಲ್ಲಿ ಪ್ರೇಮವಿವಾಹವಾಗಿ ಬಳಿಕ ಶರಣ್ಯ ಫೋನ್ ಮೂಲಕ ಕುಟುಂಬದವರಿಗೆ ತಮ್ಮ ಮದುವೆ ವಿಚಾರ ತಿಳಿಸಿದ್ದಳು. ಇದರಿಂದ ಕೆರಳಿದ ಆಕೆಯ ಸಹೋದರ ಶಕ್ತಿವೇಲು ಕೊಲೆಗೆ ಯೋಜನೆ ರೂಪಿಸಿ ದಂಪತಿಗಳಿಬ್ಬರನ್ನು ಊಟಕ್ಕೆಂದು ಮನೆಗೆ ಕರೆದಿದ್ದನು. ಸಹೋದರ ಕರೆದನೆಂದು ಶರಣ್ಯಾ ತನ್ನ ಪತಿಯೊಂದಿಗೆ ಮನೆಗೆ ಆಗಮಿಸಿ ಮನೆಯಲ್ಲಿ ಊಟ ಮಾಡಿ ಚೆನ್ನೈಗೆ ಮರಳಲು ಸಿದ್ದತೆ ನಡೆಸುತ್ತಿದ್ದರು. ಈ ವೇಳೆ ಆಕೆಯ ಸಹೋದರ ಚೂಪಾದ ಆಯುಧದಿಂದ ಹಲ್ಲೆ ಮಾಡಿ ಇಬ್ಬರ ಕತ್ತು ಕೊಯ್ದಿದ್ದಾನೆ. ಇಬ್ಬರೂ ಗಂಭೀರ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ ಎನ್ನಲಾಗಿದೆ.
ಕೃತ್ಯ ಎಸಗಿದ ಬಳಿಕ ಶಕ್ತಿವೇಲು ಮತ್ತು ಇನ್ನೊಬ್ಬ ವ್ಯಕ್ತಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ತಾಂಜಾವೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರವಳಿಪ್ರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆ ಮುಂದುವರಿದಿದೆ.