ಬೆಂಗಳೂರು, ಜೂ 14 (DaijiworldNews/MS): ಸರ್ಕಾರಕ್ಕೆ ಕಾಂಗ್ರೆಸ್ ಹೆದರುವುದು ಬೇಡ, ಅದರ ಅಗತ್ಯವೂ ಇಲ್ಲ. ಏಕೆಂದರೆ ಕಾಂಗ್ರೆಸ್ ಅಸ್ತಿತ್ವವೇ ಶೂನ್ಯ.ನೀವು ಈ ನೆಲದ ಕಾನೂನಿನ ಬಗ್ಗೆ, ಈ ನೆಲದ ಸಂವಿಧಾನ ಮೇಲೆ ಭಯ ಇಟ್ಟುಕೊಂಡರೆ ಸಾಕು ಎಂದು ಬಿಜೆಪಿ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ. ಕಾಂಗ್ರೆಸ್ ಅನ್ನುವುದೊಂದು ಸ್ವಾತಂತ್ರ್ಯ ಚಳುವಳಿ ಅಷ್ಟೇ. ರಾಜಕೀಯ ಕಾಂಗ್ರೆಸ್ ಪಕ್ಷಕ್ಕೂ, ಕಾಂಗ್ರೆಸ್ ಚಳುವಳಿಗೂ ಸಂಬಂಧವೇ ಇಲ್ಲ. ಎಲ್ಲವನ್ನೂ ಹೈಜಾಕ್ ಮಾಡಿದ್ದೀರಿ ಅಷ್ಟೇ, ಅಸಲಿ ಗಾಂಧಿಯನ್ನೂ.ಆದರೆ ನಕಲಿ ಗಾಂಧಿ ಕುಟುಂಬ ಮೆಚ್ಚಿಸಲು ನೀವಿಂದು ಸಂವಿಧಾನವನ್ನು ಕಾಲಡಿಗೆ ಹಾಕುತ್ತಿದ್ದೀರಿ, ಅಕ್ಷಮ್ಯವಿದು .ಬಿಜೆಪಿ ಶೂನ್ಯದಿಂದ ಬೆಳೆದಿರುವ ಪಕ್ಷ, ಯಾರದ್ದೋ ಶ್ರೇಯವನ್ನು ಬೆನ್ನಿಗೆ ಅಂಟಿಸಿಕೊಂಡು ಬಂದಿಲ್ಲ ಎಂದು ಹೇಳಿದೆ
ಸಿದ್ದರಾಮಯ್ಯ ಪಕ್ಷಾಂತರದ ಇತಿಹಾಸ ನೋಡಿದರೆ, ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಆಯಸ್ಸು ಮುಗಿದಂತೆ ಭಾಸವಾಗುತ್ತಿದೆ. ಸಿಎಂ ಅಭ್ಯರ್ಥಿಯೆಂದು ಘೋಷಿಸದಿದ್ದರೆ ಮುಂದುವರಿಯುತ್ತೀರಾ ಎಂದು ಬಿಜೆಪಿ ತಿವಿದಿದೆ.
"ಸುಳ್ಳು ಪಾಪ, ಸತ್ಯ ತಪಸ್ಸು" ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರ ವಂಶವಾಹಿನಿಯಲ್ಲೇ ಸುಳ್ಳು ಪ್ರವಹಿಸುತ್ತಿದೆ.ಸತ್ಯದ ಸಮಾಧಿ ಮಾಡಿ, ಸುಳ್ಳಿನ ಅರಮನೆ ಕಟ್ಟದೇ ಇದ್ದಿದ್ದರೆ ಕಾಂಗ್ರೆಸ್ ಇಷ್ಟು ವರ್ಷ ದೇಶದಲ್ಲಿ ಆಡಳಿತ ನಡೆಸಲು ಸಾಧ್ಯವೇ ಇರಲಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಆರಂಭದಿಂದಲೂ ಸುಳ್ಳನ್ನೇ ಹೇಳುತ್ತಾ ಬರುತ್ತಿದೆ.ಕಾಂಗ್ರೆಸ್ ಸತ್ಯ ಹೇಳಿದ್ದರೆ, ಪ್ರಕರಣ ವಜಾಗೊಳಿಸುವಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನ್ಯಾಯವಾದಿಗಳು ಮಾಡಿದ ವಾದವನ್ನು ನ್ಯಾಯಾಲಯ ವಜಾಗೊಳಿಸುತ್ತಿತ್ತೇ? ಕಾಂಗ್ರೆಸ್ ಪೋಣಿಸಿದ ಸುಳ್ಳಿನ ಮಣಿ ಭಗ್ನವಾಗಿದೆ ಎಂದು ಲೇವಡಿ ಮಾಡಿದೆ
ಸತ್ಯಮೇವ ಜಯತೆ ಎಂದು ಹೋರಾಟಕ್ಕೆ ಇಳಿದವರು ನ್ಯಾಷನಲ್ ಹೆರಾಲ್ಡ್ ಪ್ರಕರಣ ಈಗಾಗಲೇ ವಜಾ ಆಗಿದೆ, ಇದು ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ, ವಿಪಕ್ಷಗಳನ್ನು ಹತ್ತಿಕ್ಕುವ ಯತ್ನ ಎಂದೆಲ್ಲ ಆರೋಪಿಸುತ್ತಿದ್ದಾರೆ. ಆದರೆ ಈ ಪ್ರಕರಣ ನ್ಯಾಯಾಲಯದ ದಾಖಲಾದ ದೂರಿನ ಅನ್ವಯ ಇನ್ನೂ ನಡೆಯುತ್ತಿದೆ, ಇದು ವಾಸ್ತವ.ಸತ್ಯವೇ ನಮ್ಮ ತಾಯಿ - ತಂದೆ ಎನ್ನುತ್ತಾ ಸುಳ್ಳನ್ನೇ ಉಸಿರಾಡುವ ್ಬುರುಡೆರಾಮಯ್ಯ ಅವರು,ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದರು ಎಂದು ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಸ್ವಾತಂತ್ರ್ಯ ಯೋಧರ ಪಟ್ಟಕಟ್ಟಲು ಹೊರಟಿದ್ದಾರೆ ಸ್ವಾತಂತ್ರ್ಯ ಯೋಧರಿಗೆ ಅವಮಾನವಿದು! ಎಂದು ಕಿಡಿಕಾರಿದೆ
ಸಿದ್ದರಾಮಯ್ಯನವರೇ, ಈ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಬೇರೆ, ಮಹಾತ್ಮ ಗಾಂಧಿ ಬೇರೆ.ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಮಹಾತ್ಮ ಗಾಂಧಿಯೇ ಹೊರತು, ಈ ನಕಲಿ ಗಾಂಧಿಗಳಲ್ಲ. ಬುರುಡೆರಾಮಯ್ಯ ಅವರು ಗಾಂಧಿ ಕುಟುಂಬದ ವಂಶ ವೃಕ್ಷದ ಬಗ್ಗೆ ಮೊದಲು ಅರಿತುಕೊಳ್ಳಬೇಕು
ಮಹಾತ್ಮ ಗಾಂಧಿ ನೇತೃತ್ವದ "ಕಾಂಗ್ರೆಸ್ ಚಳುವಳಿ" ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದು ನಿಜ.ಆದರೆ, ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯವನ್ನೇ ಅಪಹರಿಸಿತ್ತು.ಸಿದ್ದರಾಮಯ್ಯನವರೇ, ತುರ್ತು ಪರಿಸ್ಥಿತಿಯ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಹೇಳಿದೆ.