ಬೆಂಗಳೂರು, ಜೂ 14 (DaijiworldNews/DB): ತಮಿಳುನಾಡು ಮುಖ್ಯಮಂತ್ರಿ ಪ್ರಧಾನಿಯವರಿಗೆ ಬರೆದ ಪತ್ರ ತರಿಸಿಕೊಂಡು ತಕರಾರು ಅಂಶಗಳ ಬಗ್ಗೆ ತಿಳಿದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಮೇಕೆದಾಟು ಯೋಜನೆ ಸಬಂಧ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿರುವುದು ಕಾನೂನು ಬಾಹಿರ. ಒಕ್ಕೂಟ ವ್ಯವಸ್ಥೆಗೆ ಮಾತ್ರವಲ್ಲ, ನಮ್ಮ ರಾಜ್ಯದ ನೀರಿನ ಹಕ್ಕು ದುರ್ಬಳಕೆ ಮಾಡುವ ಹುನ್ನಾರ ಅವರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೂ.16ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಕೇಂದ್ರ ಸರ್ಕಾರದ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆಯೂ ಈ ರೀತಿಯ ಒಟ್ಟು 15 ಸಭೆಗಳನ್ನು ನಡೆಸಲಾಗಿದೆ. ಆದರೆ ಯಾವುದೇ ಸಭೆಗಳಿಗೆ ಹಾಜರಾಗದೆ ತಮಿಳುನಾಡು ಸರ್ಕಾರ ಅಸಹಕಾರ ತೋರಿದೆ ಎಂದು ಅವರು ಆರೋಪಿಸಿದರು.