ಬೆಂಗಳೂರು, ಜೂ 10 (DaijiworldNews/MS): "ಆಹಾ ಎಂಥಹ ಆತ್ಮಸಾಕ್ಷಿ ನಿಮ್ಮದು" ಎಂದು ವ್ಯಂಗ್ಯವಾಡಿರುವ ಬಿಜೆಪಿ ಪಕ್ಷವು ಹಲವು ಪ್ರಶ್ನೆಗಳನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿಟ್ಟು ಈ ಹಿಂದೆ ,ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು? ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿಯೂ, " ಆತ್ಮಸಾಕ್ಷಿ ಸಿದ್ದರಾಮಯ್ಯ ಅವರೇ ಈ ಶಬ್ದ ಪ್ರಯೋಗ ಮಾಡುವುದಕ್ಕೆ ನಿಮಗೆ ನೈತಿಕತೆ ಇದೆಯೇ? ಆತ್ಮವಂಚಕತನಕ್ಕೆ ನಿಮಗಿಂತ ಬೇರೆ ಉದಾಹರಣೆ ಇಲ್ಲ. ಹೀಗಿರುವಾಗ ಇಂಥ ಪದ ಬಳಕೆ ನಿಮಗೆ ಶೋಭೆಯಲ್ಲ" ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, 24 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ನಡೆದು ಹೋಯಿತು. ಮಾನ್ಯ ಸಿದ್ದರಾಮಯ್ಯಅವರೇ, ನಿಮ್ಮ ಆತ್ಮಸಾಕ್ಷಿ ಆಗ ಎಲ್ಲಿ ಹೋಗಿತ್ತು?2013 ರಿಂದ 2017 ರ ಅವಧಿಯಲ್ಲಿ ಕರ್ನಾಟಕದಲ್ಲಿ 3 ಸಾವಿರಕ್ಕೂ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿತ್ತು. ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುವಾಗ , ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಆದಾಗ, ಅಂದಿನ ಗೃಹ ಸಚಿವ ಜಾರ್ಜ್ ಹಿಂದೆ ನಿಂತಾಗ ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಎಲ್ಲಿತ್ತು ಎಂದು ಪ್ರಶ್ನಿಸಿದೆ.
ನಾನು ರೈತ ಪರ. ನಾನು ನಂಜುಂಡಸ್ವಾಮಿ ಅವರ ಶಿಷ್ಯ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರೈತರು ಕುಡಿದು ಸತ್ತರು ಎಂದು ಹೇಳಿಕೆ ನೀಡಿ ರೈತರಿಗೆ ಅವಮಾನ ಮಾಡಿದ್ದರು.ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ? ಕೆಪಿಸಿಸಿಯ ಅಂದಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರನ್ನು ಸೋದರನಂತೆ ನೋಡಿಕೊಂಡರು. ಆದರೆ ಸಿದ್ದರಾಮಯ್ಯ ಅವರು ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದರು. ದಲಿತ ನಾಯಕನ ಬೆನ್ನಿಗೆ ಚೂರಿ ಹಾಕಿದ್ದು ಆತ್ಮಸಾಕ್ಷಿಯೇ ಎಂದು ಕುಹಕವಾದಿದೆ.
70 ಲಕ್ಷದ ಹುಬ್ಲೋಟ್ ಕೈಗಡಿಯಾರವನ್ನು ಗಿಫ್ಟ್ ಹೆಸರಿನಲ್ಲಿ ತೆಗೆದುಕೊಂಡು ಕೈಗೆ ಕಟ್ಟಿಕೊಳ್ಳುವಾಗ ಸಿದ್ದರಾಮಯ್ಯಆತ್ಮಸಾಕ್ಷಿ ಎಲ್ಲಿತ್ತು?ಸಿದ್ದರಾಮಯ್ಯ ಅವರು ತಾನು ಸಾಮಾಜಿಕ ನ್ಯಾಯದ ಪರ ಎಂದು ಘೋಷಿಸಿಕೊಂಡು ವಿದ್ಯಾರ್ಥಿಗಳ ಪ್ರವಾಸ ಯೋಜನೆಯಲ್ಲೂ ಜಾತಿ ಹುಡುಕಿದರು. ಶಾದಿಭಾಗ್ಯ ಯೋಜನೆ ತಂದು ಹೆಣ್ಣು ಮಕ್ಕಳಲ್ಲೂ ಧರ್ಮ ಹುಡುಕಿದರು. ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ ಎಂದು ಬಿಜೆಪಿ ಕೇಳಿದೆ
ನಾನು ಪ್ರಾಮಾಣಿಕ, ಪ್ರಾಮಾಣಿಕ ಎಂದು ಸುಳ್ಳು ಹೇಳುತ್ತಲೇ ಅರ್ಕಾವತಿ ರೀಡು ಪ್ರಕರಣದಲ್ಲಿ ಸಾವಿರಾರು ಕೋಟಿ ಕೈ ಬದಲಾಗುವಂತೆ ನೋಡಿಕೊಂಡಿರಿ. ಆಹಾ ಎಂಥಹ ಆತ್ಮಸಾಕ್ಷಿ ನಿಮ್ಮದು ಸಿದ್ದರಾಮಯ್ಯ. ಬೆಂಗಳೂರು ನಗರದಲ್ಲಿ ಸಿದ್ದರಾಮಯ್ಯಅಧಿಕಾರದಲ್ಲಿದ್ದಾಗ ಡ್ರಗ್ಸ್ ಹಾವಳಿ ಮಿತಿ ಮೀರಿತ್ತು. ಯುವಜನತೆಗೆ ದುಃಸ್ವಪ್ನವಾಗಿದ್ದ ದಂಧೆಯ ನಿಯಂತ್ರಣಕ್ಕೆ ಶ್ರಮಿಸದೇ ಸುಮ್ಮನಿದ್ದಿದ್ದು ಆತ್ಮಸಾಕ್ಷಿಯೇ? ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಎಸ್ಡಿಪಿಐ, ಪಿಎಫ್ಐನಂತಹ ಮತಾಂಧ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡರು. ಈಗ ಬಿಜೆಪಿ ಸರ್ಕಾರ ಇವುಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸುವಾಗ ಸಿದ್ದುಆತ್ಮಸಾಕ್ಷಿ ಎಲ್ಲಿತ್ತು ಎಂದು ಪ್ರಶ್ನಿಸಿದೆ
ಕಾಂಗ್ರೆಸ್ ನಡಿಗೆ-ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದವರು ಅಧಿಕಾರಕ್ಕೆ ಬಂದಾಗ ನೀಡಿದ್ದೆಷ್ಟು ಎಂದು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲು ಸಿದ್ಧರಿರುವರೇ? ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಎಲ್ಲಿತ್ತು ಎಂದು ಸರಣಿ ಪ್ರಶ್ನೆ ಕೇಳಿದೆ
ಜಾತ್ಯಾತೀತತೆಯ ಪರವಾಗಿ ಆತ್ಮಸಾಕ್ಷಿಯ ಮತವನ್ನು ನಮ್ಮ ಅಭ್ಯರ್ಥಿಗೆ ನೀಡಿ ಎಂದು ಜೆಡಿಎಸ್ ಶಾಸಕರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದು ವಿನಂತಿ ಮಾಡಿರುವ ಹಿನ್ನಲೆಯಲ್ಲಿ ಬಿಜೆಪಿ ಈ ಟ್ವೀಟ್ ಮಾಡಿದೆ.