ದೋಡಾ (ಜಮ್ಮು ಮತ್ತು ಕಾಶ್ಮೀರ), ಜೂ 10 (DaijiworldNews/DB): ಜಮ್ಮುವಿನ ಬದೇರ್ವಾಹ್ನಲ್ಲಿರುವ ಮಸೀದಿಯಿಂದ ಪ್ರಚೋದನಕಾರಿ ಘೋಷಣೆ ಮಾಡಿದ್ದಾರೆನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಇಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಘಟನೆ ನಡೆದಿದೆ. ಹೀಗಾಗಿ ಇಲ್ಲಿ ಕರ್ಫ್ಯೂ ಜಾರಿಗೊಳಿಸಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳಲ್ಲಿ ಪೊಲೀಸರು ಕರ್ಫ್ಯೂ ಜಾರಿಗೊಳಿಸಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕಾನೂನು ಕೈಗೆತ್ತಿಕೊಳ್ಳುವ ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರತ್ಯೇಕವಾಗಿ ಎರಡು ಎಫ್ಐಆರ್ಗಳ ಭಾದರ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬದೇರ್ವಾಹ್ನಲ್ಲಿ ಉಂಟಾದ ಅಹಿತಕರ ಘಟನೆ ಖೇದಕರ. ಸೌಹಾರ್ದ ಕಾಪಾಡಲು ಎರಡೂ ಸಮುದಾಯದ ಮುಖ್ಯಸ್ಥರು ಜವಾಬ್ದಾರಿ ವಹಿಸಬೇಕು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮನವಿ ಮಾಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ದೋಡಾ ಜಿಲ್ಲಾಧಿಕಾರಿ ವಿಕಾಸ್ ಶರ್ಮಾ ಮತ್ತು ಜಮ್ಮು ವಿಭಾಗೀಯ ಆಯುಕ್ತ ಎಸ್. ರಮೇಶ್ ಕುಮಾರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆಂದು ಸಿಂಗ್ ತಿಳಿಸಿದ್ದಾರೆ.