ಬೆಂಗಳೂರು, ಜೂ 10 (DaijiworldNews/DB): ಬೇರೆಯವರು ತಾಳಿ ಕಟ್ಟುವವರಿಗೆ ಲವ್ ಲೆಟರ್ ಬರೆಯುವುದು, ಪಕ್ಕದ ಮನೆಯ ಧರ್ಮಪತ್ನಿಗೆ ಪತ್ರ ಬರೆಯುವುದು ಅಪರಾಧವಲ್ಲವೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ.
ರಾಜ್ಯಸಭಾ ಚುನಾವಣೆ ಮತದಾನ ಆರಂಭವಾದ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಜೆಡಿಎಸ್ ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯ ನಡೆಯನ್ನು ಲೇವಡಿ ಮಾಡಿದರು. ಈ ಪತ್ರ ಬರೆದ ವಿಚಾರ ನೈತಿಕತೆಯದ್ದಲ್ಲ ಎಂದರು.
ಕರ್ನಾಟಕ ರಾಜ್ಯದಲ್ಲಿ ಹೊಸ ಇತಿಹಾಸ ಶುರುವಾಗಲಿದೆ. ಕಾಂಗ್ರೆಸ್ನವರು ಬಿಜೆಪಿಯನ್ನು ಸೋಲಿಸಲೇಬೇಕೆಂದಿದ್ದರೆ ಮೊದಲ ಪ್ರಾಶಸ್ತ್ಯದ ಮತವನ್ನು ಅವರ ಅಭ್ಯರ್ಥಿಗೆ ಹಾಕಿ, ಎರಡನೇ ಪ್ರಾಶಸ್ತ್ಯದ ಮತವನ್ನು ನಮಗೆ ನೀಡಲಿ. ಆದರೆ ಹಾಗೆ ಮಾಡುವುದಕ್ಕೆ ಅವರು ತಯಾರಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ನ ಚರಿತ್ರೆ ಎಲ್ಲ ನನಗೆ ಗೊತ್ತಿದೆ. ನಮ್ಮನ್ನು ಪೀಡಿಸುವುದಕ್ಕೆ ಅವರು ಬರುವುದು ಬೇಡ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರೆ ಅವರಿಗೂ ಒಳ್ಳೆಯದು. ನಾವು ಬಿಚ್ಚುವುದಕ್ಕೆ ಶುರು ಮಾಡಿದರೆ ಅವರಿಗೆ ಓಡಾಡುವುದಕ್ಕೇ ಕಷ್ಟವಾಗಬಹುದು ಎಂದು ಇದೇ ವೇಳೆ ತಿಳಿಸಿದರು.