ನವದೆಹಲಿ, ಜೂ 10 (DaijiworldNews/MS): ಅನಧಿಕೃತ ಡಿಜಿಟಲ್ ಸಾಲ ವಿತರಣಾ ಸಂಸ್ಥೆಗಳ ಮೂಲಕ ವಂಚನೆ ಎಸಗುವವರ ವಿರುದ್ದ ಹಾಗೂ ಸಾಲ ವಿತರಣಾ ಆಪ್ ಗಳನ್ನು ನಿಯಂತ್ರಿಸಲು ಶೀಘ್ರವೇ ಹೊಸ ನಿಯಮವನ್ನು ಜಾರಿ ಮಾಡಲಾಗುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಕೆಲವು ಅನಧಿಕೃತ ಸಾಲ ವಿತರಣಾ ಸಂಸ್ಥೆಗಳು ಕಾನೂನು ಬಾಹಿರವಾಗಿದ್ದು, ಅಂತಹ ಕೆಲವು ಸಂಸ್ಥೆಗಳ ಕಿರುಕುಳಕ್ಕೆ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುತ್ತದೆ. ಡಿಜಿಟಲ್ ಆಪ್ ಗಳಿಗೆ ಕಡಿವಾಣ ಹಾಕಲಾಗುವುದು ಇದಕ್ಕಾಗಿ ಶೀಘ್ರದಲ್ಲಿಯೇ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುವುದು ಎಂದು ಕೇಂದ್ರಿಯ ಪರೋಕ್ಷ ತೆರಿಗೆ ಮಂಡಾಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.
ಡಿಜಿಟಲ್ ಪ್ಲಾಟ್ ಫಾರ್ಮ್ ಗಳಿಂದ ಸಾಲ ಪಡೆದುಕೊಂಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲಾಗುವುದು. ಸಾಲ ಪಡೆದುಕೊಳ್ಳುವ ಮೊದಲು ಇಂತಹ ಆಪ್ ಗಳು ಆರ್.ಬಿ.ಐ.ನಲ್ಲಿ ಮಾನ್ಯತೆ ಪಡೆದುಕೊಂಡಿದೆಯೇ ಎಂಬುದನ್ನು ಗ್ರಾಹಕರು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಸಾಲ ನೀಡುವ ಅನಧಿಕೃತ ಡಿಜಿಟಲ್ ಆಪ್ ಗಳಿಂದ ತೊಂದರೆ ಉಂಟಾದಲ್ಲಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬೇಕೆಂದು ಹೇಳಲಾಗಿದೆ.