ಬೆಂಗಳೂರು, ಜೂ 09 (DaijiworldNews/DB): ಕ್ರಾಸ್ ವೋಟಿಂಗ್ ಮಾಡಿಸಿದರೂ ಕಾಂಗ್ರೆಸ್ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಆದರೆ ನಮಗೆ ಅಂತಹ ಯಾವುದೇ ಭಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮತ ನೀಡುವಂತೆ ಕೋರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕರಿಗೆ ಪತ್ರ ಬರೆದಿರುವುದು ನಾಚಿಕೆಗೇಡು. ಒಂದು ಕಡೆ ನಮ್ಮನ್ನು ಬಿಜೆಪಿಯ ಬಿ ಟೀಮ್ ಎನ್ನುತ್ತಾರೆ, ಇನ್ನೊಂದೆಡೆ ಮತ ಕೇಳಲು ಪತ್ರ ಬರೆಯುತ್ತಾರೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಜೆಡಿಎಸ್ನದ್ದು ಎರಡೂ ಹೋಗಲಿ ಎಂಬಂತೆ ಅವರು ವರ್ತಿಸುತ್ತಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಲೆಂದೇ ಅವರು ಈ ರೀತಿ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ನ ಎಲ್ಲಾ 32 ಮಂದಿ ಶಾಸಕರು ನಮ್ಮೊಂದಿಗೇ ಇದ್ದಾರೆ. ಬೇರೆ ಪಕ್ಷದವರಾರೂ ನಮ್ಮೊಂದಿಗೆ ಇಲ್ಲ. ಕಾಂಗ್ರೆಸ್ನಲ್ಲಿರುವ ಕೆಲ ಆತ್ಮೀಯರಿಗಷ್ಟೇ ನಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವಿಮಾಡಿದ್ದೇನೆ ಎಂದು ಇದೇ ವೇಳೆ ಎಚ್ಡಿಕೆ ಸ್ಪಷ್ಟಪಡಿಸಿದರು.
ಜೆಡಿಎಸ್ನ ಎರಡನೇ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರು ನನ್ನನ್ನು ದೂರವಾಣಿ ಮುಖಾಂತರ ಮನವಿ ಮಾಡಿದ್ದಾರೆ. ಆದರೆ ನಾವು ನೀಡಿದರೂ ಅವರು ಗೆಲುವು ಸಾಧಿಸುವುದಿಲ್ಲವಾದ್ದರಿಂದ ಆ ಮತವನ್ನು ನಮ್ಮ ಅಭ್ಯರ್ಥಿಗೆ ನೀಡಿ ಎಂದು ಕೇಳಿದ್ದೇನೆ. ಆದರೆ ಅವರು ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಗೊತ್ತಿಲ್ಲ ಎಂದರು.
ಕಾಂಗ್ರೆಸ್ನಲ್ಲಿ ತಮಗೆ ಅಧಿಕಾರಿ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಸೇರಲು ಎಲ್.ಕೆ. ಅಡ್ವಾಣಿ ಅವರೊಂದಿಗೆ ಚೌಕಾಸಿ ಮಾಡಿ ಬಿಜೆಪಿಗೆ ಟವೆಲ್ ಹಾಕಲು ಸಿದ್ದರಾಮಯ್ಯ ನೋಡಿದ್ದರು. ಆತ್ಮಸಾಕ್ಷಿ ಎಂಬುದು ಇದ್ದರೆ ಇದನ್ನು ಸುಳ್ಳು ಎಂದು ಹೇಳಲಿ ನೋಡೋಣ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯಗೆ ಸವಾಲೆಸೆದರು.